ಬೆಂಗಳೂರು: ಕೆಲಸಕ್ಕೆ ಇದ್ದ ಅಂಗಡಿಯಲ್ಲೇ 30 ಲಕ್ಷ ರೂಪಾಯಿ ದೋಚಿ ಕೆಲಸಗಾರ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾಜಸ್ಥಾನ ಮೂಲದ ಗಣೇಶ್ ಹಣದೊಂದಿಗೆ ಪರಾರಿಯಾದ ವ್ಯಕ್ತಿಯಾಗಿದ್ದಾನೆ. ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಹೊರರಾಜ್ಯದ ಈತ, ಮಾಲೀಕ ಇಲ್ಲದ ಸಮಯದಲ್ಲಿ ಅಂಗಡಿಯಲ್ಲಿದ್ದ 30 ಲಕ್ಷ ರೂ. ಹಣವನ್ನು ಕದ್ದು ಪರಾರಿಯಾಗಿದ್ದಾನೆ.
ಅಂಗಡಿ ಮಾಲೀಕ ಜಯಚಂದ್ರ ಅವರು ಹೇಳುವ ಪ್ರಕಾರ, ಬಿವಿಕೆ ಐಯ್ಯಂಗಾರ್ ರಸ್ತೆಯ ಮುರುದಾರ್ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಆರೋಪಿ ಗಣೇಶ್ ಕಳೆದ ಆರೇಳು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ. ಕೆಲವು ದಿನಗಳಿಂದ ಗಣೇಶ್ ಕಾಣಿಸುತ್ತಿರಲಿಲ್ಲ. ನಾನು ಆತ ವಾಪಸ್ ಬರಬಹುದು ಎಂದು ನೋಡಿದೆ. ಆದರೆ ಒಂದು ವಾರದಿಂದ ಆತ ಪತ್ತೆಯಾಗಿಲ್ಲ, ಸಂಪರ್ಕಕ್ಕೂ ಸಿಗಲಿಲ್ಲ. ಆಗ ಅನುಮಾನಗೊಂಡು ಅಂಗಡಿಯಲ್ಲಿ ಇಟ್ಟಿದ್ದ ಹಣವನ್ನು ನೋಡಿದೆ, ಹಣ ಕಾಣಿಸಲಿಲ್ಲ. ನಾನು ಅಂಗಡಿಯಲ್ಲಿ ಇಟ್ಟಿದ್ದ 30 ಲಕ್ಷ ರೂಪಾಯಿ ನಗದನ್ನು ಡಿ.21ರಂದು ನಾನು ಇಲ್ಲದ ಸಮಯವನ್ನು ನೋಡಿ ಕದ್ದು ಪರಾರಿಯಾಗಿದ್ದಾನೆ ಎಂದು ದೂರಿದ್ದಾರೆ.
ಎಲೆಕ್ಟ್ರಿಕಲ್ ಅಂಗಡಿ ಮಾಲೀಕ ಜಯಚಂದ್ರ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಒಂದು ತಂಡ ಆರೋಪಿಯ ಜಾಡು ಹಿಡಿದು ರಾಜಸ್ಥಾನಕ್ಕೆ ಹೋಗಿದೆ. ಆರೋಪಿಯ ಪತ್ತೆಗೆ ಶೋಧಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿದ್ದಾರೆ.