ಬಾಗಲಕೋಟೆ: ಜಿಲ್ಲೆಯ ಕೌಲ್ ಬಜಾರ್ ನಲ್ಲಿ ಬಾಡಿಗೆದಾರನ ಮಗುವನ್ನು ಅಪಹರಿಸಿರುವ ಆರೋಪವೊಂದು ಮನೆ ಮಾಲೀಕನ ವಿರುದ್ಧ ಕೇಳಿ ಬಂದಿದೆ.
3 ವರ್ಷದ ರಿತಿಕಾ ಹಾಳಕೇರಿ ನಾಪತ್ತೆಯಾದ ಬಾಲಕಿ. ಈಕೆಯನ್ನು 50 ವರ್ಷದ ಶರಣಬಸಪ್ಪ ಎಂಬ ಮನೆ ಮಾಲೀಕನೇ ಕಿಡ್ನಾಪ್ ಮಾಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ.
ಶುಕ್ರವಾರ ಸಂಜೆ ಆಟ ಆಡಿಸುವ ನೆಪದಲ್ಲಿ ಬಾಲಕಿ ರಿತಿಕಾಳನ್ನು ಶರಣಬಸಪ್ಪ ಕಿಡ್ನಾಪ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಶರಣಬಸಪ್ಪ ಬಾಗಲಕೋಟೆಯ ಹಳೆ ಬಸ್ ನಿಲ್ದಾಣದಲ್ಲಿ ತನ್ನ ಬೈಕ್ ಇಟ್ಟು ಎಸ್ಕೇಪ್ ಆಗಿದ್ದಾಗಿ ತಿಳಿದುಬಂದಿದೆ.
ಸುದ್ದಿ ತಿಳಿದ ಬಾಗಲಕೋಟೆ ನಗರಠಾಣೆ ಪೊಲೀಸರು ತಡರಾತ್ರಿಯಿಂದ ಬಸ್ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿದ್ದು, ಹುಡುಕಾಟ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಇತ್ತ ಬಾಲಕಿ ರಿತಿಕಾ ಕಿಡ್ನಾಪ್ ಆದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.
ರಿತಿಕಾಳ ತಾಯಿ ದೀಪಾ ಹಾಲಕೇರಿ ತಮ್ಮ ಒಂದು ತಿಂಗಳ ಹಸುಗೂಸನ್ನು ಮಡಿಲಲ್ಲಿ ಇಟ್ಟುಕೊಂಡು ಮೊದಲನೇ ಮಗು ರಿತಿಕಾಗಾಗಿ ಕಾಯುತ್ತಿದ್ದಾರೆ. ಈ ಸಂಬಂಧ ಬಾಗಲಕೋಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.