ಕಾಶ್ಮೀರದಲ್ಲಿ 3 ಉಗ್ರರನ್ನ ಹೊಡೆದುರುಳಿಸಿದ ಭದ್ರತಾ ಪಡೆ- ಶ್ರೀನಗರದಲ್ಲಿ ಶಾಲಾ ಕಾಲೇಜುಗಳು ಬಂದ್

Public TV
1 Min Read
terrorists encounter

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆ ಸಿಬ್ಬಂದಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ಶಾಲಾ ಕಾಲೇಜುಗಳನ್ನ ಮುಚ್ಚಲಾಗಿದೆ.

ಉಗ್ರರಲ್ಲಿ ಇಬ್ಬರನ್ನ ಗುರುತಿಸಲಾಗಿದ್ದು, ಶ್ರೀನಗರದ ಸೌರಾದ ಈಸಾ ಫಜಿಲಿ ಹಾಗೂ ದಕ್ಷಿಣ ಕಾಶ್ಮೀರದ ಕೊಕೆರ್ನಾಗ್‍ನ ಸೈಯದ್ ಓವೈಸ್ ಹತ್ಯೆಯಾಗಿದ್ದಾರೆ. ಮತ್ತೋರ್ವ ಉಗ್ರನ ಗುರುತು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರ ಪ್ರಕಾರ ಉಗ್ರರಲ್ಲಿ ಒಬ್ಬ ಇತ್ತೀಚೆಗೆ ಸೌರಾದಲ್ಲಿ ಪೊಲೀಸ್ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಪೇದೆಯೊಬ್ಬರು ಹುತಾತ್ಮರಾಗಿದ್ದರು.

ಅನಂತ್‍ನಾಗ್‍ನ ಹಕೂರಾ ಪ್ರದೇಶದಲ್ಲಿ ಉಗ್ರರ ಇರುವಿಕೆ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಉಗ್ರರು ತಪ್ಪಿಸಿಕೊಳ್ಳಲು ನಾವು ಅವಕಾಶ ನೀಡಲಿಲ್ಲ ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ, ಅಡಗಿ ಕುಳಿತಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆ ಅಧಿಕಾರಿಗಳು ಎನ್‍ಕೌಂಟರ್ ನಡೆಸಿ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪೊಲೀಸರು ಎಕೆ47 ರೈಫಲ್‍ಗಳು, ಪಿಸ್ತೂಲ್‍ಗಳು ಹಾಗೂ ಗ್ರೆನೇಡ್‍ಗಳನ್ನ ವಶಪಡಿಸಿಕೊಂಡಿದ್ದಾರೆ.

Share This Article