ತುಮಕೂರು: ವಿಷ ಆಹಾರ ಸೇವಿಸಿ ಮಕ್ಕಳು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರ ಪೈಕಿ ನಾಲ್ವರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.
ಪ್ರಕರಣದ ಸಂಬಂಧ ಆರು ಮಂದಿ ವಿರುದ್ದ ಎಫ್.ಐ.ಆರ್ ದಾಖಲಾಗಿತ್ತು. ಅವರಲ್ಲಿ ನಾಲ್ವರು ಆರೋಪಿಗಳನ್ನು ಶುಕ್ರವಾರ ರಾತ್ರಿ ಚಿಕ್ಕನಾಯಕನಹಳ್ಳಿಯ ಒಂದನೇ ಜೆಎಂಎಪ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಪೈಕಿ ಶಾಲಾ ಮಾಲಿಕ, ಮಾಜಿ ಶಾಸಕ ಕಿರಣ್ ಕುಮಾರ್ (01) ಮತ್ತು ಪತ್ನಿ ಕವಿತಾ ಕಿರಣ್ (02) ಇನ್ನೂ ನಾಪತ್ತೆಯಾಗಿದ್ದಾರೆ.
ಉಳಿದಂತೆ ವಾರ್ಡ್ನ್ ಸುಹಾಸ್ (03), ಅಡುಗೆ ಸಹಾಯಕ ಜಗದೀಶ್(04), ಅಡುಗೆ ಭಟ್ಟ ಶಿವಣ್ಣ (05), ಅಡುಗೆ ಸಹಾಯಕಿ ರಂಗಲಕ್ಷ್ಮಿಮ್ಮ(06) ಇವರಿಗೆ ಜಾಮೀನು ಮುಂಜೂರಾಗಿದೆ. ಈ ನಡುವೆ ನಿನ್ನೆ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದ ಕಿರಣ್ ಕುಮಾರ್ ಅವರನ್ನು ಪೊಲೀಸರೇ ರಕ್ಷಣೆ ನೀಡಿ ಬಚಾವ್ ಮಾಡಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದ ಸಚಿವ ಜಯಚಂದ್ರ ಕಣ್ಣೀರಿಟ್ಟು ಭಾವೋದ್ವೇಗಕ್ಕೊಳಗಾಗಿದ್ದರು. ಆಕಾಂಕ್ಷ್ ಮತ್ತು ಶ್ರೇಯಸ್ಸ ಜಯಚಂದ್ರ ಸಂಬಂಧಿಗಳು.
ನಡೆದಿದ್ದೇನು?: ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ವಿದ್ಯಾವಾರಿಧಿ ಇಂಟರ್ನ್ಯಾಷನಲ್ ಬೋರ್ಡಿಂಗ್ ಶಾಲೆಯಲ್ಲಿ ವಿಷಯುಕ್ತ ಆಹಾರ ಸೇವಿಸಿ 15 ವರ್ಷದ ಶ್ರೇಯಸ್, ಆಕಾಂಕ್ಷ್ ಪಲ್ಲಕ್ಕಿ ಹಾಗೂ ಶಾಂತಮೂರ್ತಿ ಎಂಬ ಮೂವರು ಅಮಯಾಕ ಮಕ್ಕಳು ಸಾವನಪ್ಪಿದ್ದರು. ಈ ಶಾಲೆ ಬಿಜೆಪಿಯ ಮಾಜಿ ಶಾಸಕ ಕಿರಣ್ ಕುಮಾರ್ ಅವರಿಗೆ ಸೇರಿದ್ದ ಅಂತಾ ತಿಳಿದುಬಂದಿತ್ತು. ಘಟನೆ ಸಂಬಂಧ ಆರು ಮಂದಿ ವಿರುದ್ದ ಎಫ್.ಐ.ಆರ್ ದಾಖಲಾಗಿತ್ತು. ಇದರಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ಕೋರ್ಟ್ ಇವರಿಗೆ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.