ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಭರ್ಜರಿಯಾಗಿಯೇ ಸುರಿಯುತ್ತಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ, ರಾಯಬಾಗ, ಬೈಲಹೊಂಗಲ ಪಟ್ಟಣದಲ್ಲಂತೂ ಮಳೆರಾಯ ಅಕ್ಷರಶಃ ಆರ್ಭಟ ತೋರಿದ್ದಾನೆ.
ಇಂಚಲ ಗ್ರಾಸ್ನಲ್ಲಿ ಬೈಕ್ವೊಂದು ಕೊಚ್ಚಿ ಹೋಗ್ತಿದ್ರೆ, ಇನ್ನೊಬ್ಬರು ತನ್ನ ಬೈಕ್ ಹಿಡಿಯಲು ಒದ್ದಾಡುತ್ತಿದ್ದ ದೃಶ್ಯ ಕಂಡುಬಂತು.
ಸಿಡಿಲ ಆರ್ಭಟಕ್ಕೆ ರಾಜ್ಯದಲ್ಲಿ ಮೂರು ಜನ ಬಲಿಯಾಗಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹದರಗಟ್ಟಿ ತಾಂಡದಲ್ಲಿ ಸಿಡಿಲು ಬಡಿದು ರೈತ ಪಾಂಡಪ್ಪ ಲಮಾಣಿ ಎಂಬವರು ಮೃತಪಟ್ಟಿದ್ದಾರೆ. ಧಾರವಾಡದ ನವಲೂರು ನಿವಾಸಿ ಮಲಕುಪ್ಪ ಸೂರ್ಯವಂಶಿ ಎಂಬ ರೈತ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಆಲದಗೇರಿ ಗ್ರಾಮದಲ್ಲಿ ಯುವ ರೈತ ಫಕ್ಕೀರಪ್ಪ ಗೋಣೇರ ಸಿಡಿಲಿಗೆ ಬಲಿಯಾಗಿದ್ದಾರೆ.
ರೇಷ್ಮೆನಗರಿ ರಾಮನಗರದಲ್ಲಿ ಮಧ್ಯರಾತ್ರಿ ಒಂದೂವರೆ ತಾಸು ಧಾರಾಕಾರ ಮಳೆ ಸುರಿದಿದ್ದು ಕನಕಪುರ ತಾಲೂಕಿನಲ್ಲಿ ಜಿಲ್ಲೆಯಲ್ಲಿಯೇ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಚಿಕ್ಕಬಳ್ಳಾಪುರ, ನೆಲಮಂಗಲ, ಆನೇಕಲ್ನಲ್ಲಿ ಧಾರಾಕಾರ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಒಂದೆಡೆ ಒಳ್ಳೆ ಮಳೆಯಾಗುತ್ತಿರುವುದು ರೈತರಿಗೆ ಖುಷಿ ತಂದ್ರೆ ಮತ್ತೊಂದೆಡೆ ಭಾರಿ ಮಳೆಗೆ ಬೆಳೆನಾಶದ ಜೊತೆ ಜೀವಹಾನಿಯೂ ಸಂಭವಿಸುತ್ತಿರುವುದು ಆತಂಕ ಸೃಷ್ಟಿಸಿದೆ.