ಹಾಸನ: ಶಿರಾಡಿ ಘಾಟ್ (Shiradi Ghat) ಮಾರ್ಗದಲ್ಲಿ ನಿರ್ಮಾಣವಾಗಲಿರುವ ಸುರಂಗ ಮಾರ್ಗದ (Tunnel Road) ಪ್ರಾಥಮಿಕ ಹಂತದ ರೂಪುರೇಷೆ ತಯಾರು ಮಾಡಲಾಗಿದೆ. ಕೇಂದ್ರದ ಮಂತ್ರಿಗಳು ಒಪ್ಪಿಗೆ ಕೊಟ್ಟ ಮೇಲೆ ಯೋಜನೆ ಮುಂದುವರಿಯಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ (Satish Jarkiholi) ಹೇಳಿದ್ದಾರೆ.
ಸಕಲೇಶಪುರ ತಾಲ್ಲೂಕಿನ ಶಿರಾಡಿ ಘಾಟ್ ರಸ್ತೆಯಲ್ಲಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 30 ಕಿಲೋಮೀಟರ್ ಉದ್ದದ ಕರ್ನಾಟಕದ ಹೆಮ್ಮೆಯ ಯೋಜನೆ ಇದಾಗಿದೆ. ಅದರಲ್ಲಿ 3.8 ಕಿಲೋಮೀಟರ್ ಸುರಂಗ ಇದ್ದರೆ, 10 ಕಿ.ಮೀ ವಯಡಕ್ಟ್ ಇರಲಿದೆ ಎಂದರು.
ಮಾರೇನಹಳ್ಳಿಯಿಂದ ಪ್ರಾರಂಭವಾಗಿ ಅಡ್ಡಹೊಳೆಯವರೆಗೆ ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಇಲ್ಲಿ ಬಹಳಷ್ಟು ಅರಣ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿರುವ ಹಿನ್ನೆಲೆಯಲ್ಲಿ ವಿವರವಾದ ಅಂದಾಜು ಮಾಡಬೇಕಿದೆ. ಈಗಾಗಲೇ ಒನ್ವೇ ಸಂಚಾರದ ಪ್ರಸ್ತಾಪ ಬಂದಿದೆ. ಒಂದು ಕಡೆಯಿಂದ ವಾಹನಗಳು ಹೋಗಲು ಒಂದು ಕಡೆಯಿಂದ ಬರಲು ಅನುಕೂಲ ಆಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 16 ವರ್ಷ ಪೂರೈಸಿದ ಹಿಟ್ಮ್ಯಾನ್
ಹಾಸನದಿಂದ ಸಕಲೇಶಪುರ ಬೈಪಾಸ್ವರೆಗೆ ನವೆಂಬರ್ 1 ರೊಳಗೆ ಕಾಮಗಾರಿ ಮುಗಿಸಲು ಸಮಯ ನೀಡಿದ್ದೇವೆ. ಅಧಿಕಾರಿಗಳು ಮುದಿನ ಕಾಮಗಾರಿ ಮುಗಿಸಲು ಮುಂದಿನ ವರ್ಷ ಮಾರ್ಚ್24 ರವರೆಗೆ ಸಮಯ ಕೇಳಿದ್ದಾರೆ. ಸಂಪೂರ್ಣ ಕಾಮಗಾರಿ ಮಾಡಲು ಸಮಯ ಕೇಳಿದ್ದಾರೆ. ನಾವು ಪ್ರತಿ ತಿಂಗಳು ಯೋಜನೆಯ ಪ್ರಗತಿಯನ್ನು ಪರಿಶೀಲಿಸುತ್ತೇವೆ ಎಂದು ಹೇಳಿದರು.
ಎಲ್ಲಾ ಸರ್ಕಾರಗಳು ಇದ್ದ ವೇಳೆ ಕಾಮಗಾರಿ ಯಾಕೆ ವಿಳಂಬವಾಗಿದೆ ಗೊತ್ತಿಲ್ಲ. ಏಕೆ ಆಗಿದೆ ಎಂಬುದನ್ನು ಹುಡುಕುವ ಬದಲು ಮುಂದಿನ ಪರಿಹಾರ, ಎಷ್ಟು ಸಮಯದ ಅವಧಿಯಲ್ಲಿ ಕಾಮಗಾರಿ ಮುಗಿಸುತ್ತೇವೆ ಎನ್ನುವುದು ಮುಖ್ಯ. ಎರಡು ಟೈಂ ಕೊಟ್ಟಿದ್ದೇವೆ ಒಂದು ನ.1, ಇನ್ನೊಂದು ಮಾ.24 ಕ್ಕೆ ಮುಗಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡ್ತಿವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೆಲಸ ವಿಳಂಬವಾಗಿದೆ. ಮಳೆಗಾಲದಲ್ಲಿ ಭೂಕುಸಿತವಾಗಿದೆ. ಅದಕ್ಕೆ ಕಡ್ಡಾಯವಾಗಿ ಎಲ್ಲಾ ಕಡೆ ರಿಟೈನಿಂಗ್ ವಾಲ್ ಮಾಡಬೇಕು. ಎಲ್ಲೆಲ್ಲಿ ಬಹಳಷ್ಟು ಸಮಸ್ಯೆಯಿದೆ ಅಲ್ಲಲ್ಲಿ ಕಾಂಕ್ರಿಟ್ ವಾಲ್ ಕಟ್ಟಲು ಸೂಚನೆ ಕೊಟ್ಟಿದ್ದೇವೆ. ಭೂಕುಸಿತದಿಂದ ನಷ್ಟ ಅನುಭವಿಸುವವರಿಗೆ ಪರಿಹಾರ ಕೊಡುತ್ತೇವೆ ಎಂದರು.