ಚಿತ್ರದುರ್ಗ: ಪೋಕ್ಸೋ ಕೇಸಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀ (Murugha Shree) ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಕ್ತಿದೆ. 2ನೇ ಪೋಕ್ಸೋ ಕೇಸ್ (POCSO Case) ಸಂಬಂಧ ಸಿಆರ್ಪಿಸಿ 161 ಅಡಿ ನಿನ್ನೆ ಮೈಸೂರಿನಲ್ಲಿ ಇಬ್ಬರು ಸಂತ್ರಸ್ತ ಬಾಲಕಿಯರು ಹಾಗೂ ತಾಯಿಯ ಹೇಳಿಕೆಯನ್ನು ಚಿತ್ರದುರ್ಗ ಪೊಲೀಸರು (Chitradurga Police) ದಾಖಲಿಸಿದ್ದರು. ಆದರೆ ಸಂತ್ರಸ್ತ ಬಾಲಕಿ & ತಾಯಿ ನೀಡಿದ ಹೇಳಿಕೆಯಲ್ಲಿ ಕೆಲ ವ್ಯತ್ಯಾಸ, ಗೊಂದಲಗಳಿದೆ ಎನ್ನಲಾಗಿದೆ. ಅಲ್ಲದೇ ಚಿತ್ರದುರ್ಗ ಜಡ್ಜ್ ಮುಂದೆ ಹಾಜರುಪಡಿಸಿ, ಮತ್ತೋರ್ವ ಬಾಲಕಿಯ ಹೇಳಿಕೆ ದಾಖಲಿಸುವ ಸಾಧ್ಯತೆಯಿದೆ.
ಈ ಪ್ರಕರಣದಲ್ಲಿ ಒಟ್ಟು ನಾಲ್ವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪ ಕೇಳಿಬಂದಿರುವ ಹಿನ್ನೆಲೆ ಓರ್ವ ಸಂತ್ರಸ್ತೆಯ ಆಪ್ತ ಸಮಾಲೋಚನೆಯನ್ನು ಚಿತ್ರದುರ್ಗ ಸಿಡಬ್ಲೂಸಿ ಸಮಿತಿ ನಡೆಸಿದೆ. ಸಿಆರ್ಪಿಸಿ 164 ಅಡಿ ಬಾಲಕಿಯ ಹೇಳಿಕೆಯನ್ನೂ ಜಡ್ಜ್ ಮುಂದೆ ದಾಖಲಿಸಿದ್ದಾರೆ. ಮತ್ತೋರ್ವ ಬಾಲಕಿಯ ಹೇಳಿಕೆ ದಾಖಲಿಸಲು ಸಿಡಬ್ಲುಸಿ ಸಮಿತಿಗೆ ಪೊಲೀಸರು ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: 2ನೇ ಪೋಕ್ಸೋ ಕೇಸಲ್ಲಿ ಮುರುಘಾಶ್ರೀಗೆ ಸಂಕಷ್ಟ- ಮೈಸೂರಲ್ಲಿ ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
ಮುರುಘಾ ಶ್ರೀಗಳ ವಿರುದ್ಧ 2ನೇ ಪೋಕ್ಸೋ ಕೇಸ್ ದಾಖಲಾಗುತ್ತಿದ್ದಂತೆ, ಹೊಸ ಪೀಠಾಧ್ಯಕ್ಷರ ಆಯ್ಕೆ, ಆಡಳಿತಾಧಿಕಾರಿಗಳ ನೇಮಕಕ್ಕೆ ವಿರೋಧಿಗಳು ಬಿಗಿಪಟ್ಟು ಹಿಡಿದಿದ್ದರು. ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪರನ್ನೂ ಕೂಡ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ, ನಿನ್ನೆ ಶ್ರೀಗಳ ವಿರೋಧಿ ಹಾಗೂ ಮಾಜಿ ಸಚಿವ ಏಕಾಂತಯ್ಯ ಶ್ರೀಗಳನ್ನು ಭೇಟಿಯಾಗಿ ಮನವೊಲಿಕೆಗೆ ಮುಂದಾಗಿದ್ದಾರೆ ಅನ್ನೋ ಮಾತು ಕೂಡ ಕೇಳಿಬಂದಿದೆ.
ಒಟ್ಟಿನಲ್ಲಿ ಮುರುಘಾ ಶ್ರೀ ವಿರುದ್ಧದ 2ನೇ ಪೋಕ್ಸೋ ಕೇಸ್ನ ತನಿಖೆ ಚುರುಕುಗೊಂಡಿದೆ. ಈ ಮಧ್ಯೆ ಮುರುಘಾ ಶ್ರೀ ಪೀಠತ್ಯಾಗಕ್ಕೆ ಕೂಗು ಹೆಚ್ಚಾಗಿದೆ. ಸರ್ಕಾರ ಏನಾದ್ರೂ ಮಧ್ಯೆ ಪ್ರವೇಶಿಸಿ ಹೊಸ ಪೀಠಾಧಿಪತಿಯ ಹೆಸರನ್ನು ಘೋಷಿಸ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.