ನವದೆಹಲಿ: 26 ವರ್ಷದ ಯುವಕನೊಬ್ಬ ಫೇಸ್ ಬುಕ್ ಗೆಳತಿಗಾಗಿ ಸುಪಾರಿ ನೀಡಿ ಪೋಷಕರನ್ನು ಹತ್ಯೆ ಮಾಡಿಸಿರುವ ಘಟನೆ ದೆಹಲಿಯ ಜಾಮಿಯಾ ನಗರದಲ್ಲಿ ನಡೆದಿದೆ.
ಆರೋಪಿ ಅಬ್ದುಲ್ಲಾ ರೆಹಮಾನ್ ಪೋಷಕರಿಗೆ ಒಬ್ಬನೆ ಮಗನಾಗಿದ್ದು, ರೆಹಮಾನ್ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಕೆಲಸ ಕಳೆದುಕೊಂಡ ನಂತರ ಆತ ಡ್ರಗ್ಸ್ ದಾಸನಾಗಿದ್ದ. ಈತನಿಗೆ ಕಾನ್ಪುರದ ಮಹಿಳೆಯೊಂದಿಗೆ ಸಂಬಂಧ ಇತ್ತು. ಇವರಿಬ್ಬರು ಎರಡು ವರ್ಷಗಳ ಹಿಂದೆ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದರು. ಆದರೆ ಇವರಿಬ್ಬರ ಮದುವೆಗೆ ಪೋಷಕರು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡು ಈ ಕೃತ್ಯ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಏನಿದು ಪ್ರಕರಣ?
ಆರೋಪಿ ರೆಹಮಾನ್ ಗೆ ಈಗಾಗಲೇ ಮದುವೆಯಾಗಿದ್ದು, ವಿಚ್ಛೇದನ ಪಡೆದುಕೊಂಡಿದ್ದನು. ನಂತರ ಆತ ಕಾನ್ಪುರದ ಮಹಿಳೆಯೊಂದಿಗೆ ಸ್ನೇಹ ಬೆಳಸಿದ್ದಾನೆ. ಆದರೆ ಈತ ಪೋಷಕರು ಒಪ್ಪಿದ ಹುಡುಗಿಯನ್ನು 2017 ರಲ್ಲಿ ಮತ್ತೆ ಎರಡನೇ ಮದುವೆಯಾಗಿದ್ದನು. ಆದರೂ ಆರೋಪಿ ಫೇಸ್ ಬುಕ್ ಗೆಳತಿಯನ್ನು ಪ್ರತಿದಿನ ಭೇಟಿಯಾಗುತ್ತಿದ್ದು, ಇಬ್ಬರ ಮಧ್ಯೆ ದೈಹಿಕ ಸಂಬಂಧ ಕೂಡ ಇತ್ತು. ಅಷ್ಟೇ ಅಲ್ಲದೇ ಆಕೆಗೂ ಮದುವೆಯಾಗುವುದಾಗಿ ಭರವಸೆ ನೀಡಿದ್ದನು ಎಂದು ಜಿಲ್ಲಾ ಪೊಲೀಸ್ ಆಯುಕ್ತ ಚಿನ್ಮೊಯ್ ಬಿಸ್ವಾಲ್ ತಿಳಿಸಿದ್ದಾರೆ.
ಆರೋಪಿ ಫೇಸ್ ಪುಕ್ ಗೆಳತಿಯನ್ನು ಮದುವೆಯಾಗುತ್ತೇನೆ ಎಂದು ಮನೆಯಲ್ಲಿ ತಿಳಿಸಿದ್ದಾನೆ. ಆದರೆ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪೋಷಕರ ಕೊಲೆ ಮಾಡುವಂತೆ ನದೀಮ್ ಖಾನ್ ಮತ್ತು ಗುಡ್ಡು ಇಬ್ಬರಿಗೆ 2.5 ಲಕ್ಷ ಸುಪಾರಿ ನೀಡಿದ್ದಾನೆ. ಅದರಂತೆ ಒಂದು ದಿನ ಮನೆಯಲ್ಲಿ ಮಲಗಿದ್ದ ವೇಳೆ ಮೂವರು ಹೋಗಿ ಹಲ್ಲೆ ಮಾಡಿ ಪೋಷಕರನ್ನು ಕೊಲೆ ಮಾಡಿದ್ದಾರೆ.
ಮೃತ ಶವಗಳನ್ನು ಮನೆಯ ಮೊದಲ ಮಹಡಿಯಲ್ಲಿ ಏಪ್ರಿಲ್ 28 ರಂದು ಪತ್ತೆ ಮಾಡಲಾಯಿತು. ನಂತರ ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಏಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಬಳಿಕ ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸದ್ಯಕ್ಕೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬಿಸ್ವಾಲ್ ಹೇಳಿದ್ದಾರೆ.