ನವದೆಹಲಿ: ಹೊಸ ವರ್ಷದಂದೇ ಭಾರತಕ್ಕೆ (India) ದೊಡ್ಡ ಯಶಸ್ಸು ಸಿಕ್ಕಿದೆ. ಮುಂಬೈ ಉಗ್ರ ದಾಳಿ (2008 Mumbai Attacks) ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾಗಿದ್ದ ಪ್ರಮುಖ ಆರೋಪಿ ತಹವ್ವುರ್ ಹುಸೇನ್ ರಾಣಾನನ್ನು (Tahawwur Hussain Rana) ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ನ್ಯಾಯಾಲಯ (US Court) ಆದೇಶ ಪ್ರಕಟಿಸಿದೆ.
2008ರ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಹುಸೇನ್ ರಾಣಾನನ್ನು ಸ್ಥಳಾಂತರ ಮಾಡುವಂತೆ ಭಾರತ ಬಹಳ ಪ್ರಯತ್ನ ನಡೆಸುತ್ತಿತ್ತು.
ಈಗ ಅಮೆರಿಕದ ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರ ಸಮಿತಿ ರಾಣಾನನ್ನು ಹಸ್ತಾಂತರಿಸುವಂತೆ ಆದೇಶಿಸಿರುವುದರಿಂದ ಸದ್ಯ ಜೈಲಿನಲ್ಲಿರುವ ಪಾಕಿಸ್ತಾನಿ (Pakistan) ಮೂಲದ ಕೆನಡಾ ಉದ್ಯಮಿ ತಹವ್ವುರ್ ರಾಣಾನನ್ನು ಶೀಘ್ರವೇ ಭಾರತಕ್ಕೆ ಕರೆ ತರುವ ಸಾಧ್ಯತೆಯಿದೆ. ಇದನ್ನೂ ಓದಿ: ಮೊದಲ ಕ್ಯಾಬಿನೆಟ್ ರೈತರಿಗೆ ಅರ್ಪಿಸಿದ ಮೋದಿ – ಡಿಎಪಿ ಗೊಬ್ಬರಕ್ಕೆ ಸಬ್ಸಿಡಿ
ಕೋರ್ಟ್ ಆದೇಶ ಬಳಿಕ ಆತನನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತಕ್ಕೆ ಕರೆತರುವ ಪ್ರಕ್ರಿಯೆಯನ್ನು ರಾಷ್ಟ್ರೀಯ ತನಿಖಾ ದಳ (NIA) ಆರಂಭಿಸಿದೆ.
2008 ರಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ನಡೆಸಿದ 26/11 ಮುಂಬೈ ದಾಳಿಯಲ್ಲಿ ರಾಣಾನ ಪಾತ್ರದ ಬಗ್ಗೆ ಎನ್ಐಎ ತನಿಖೆ ನಡೆಸುತ್ತಿದೆ. ಉಭಯ ದೇಶಗಳ ನಡುವಿನ ಹಸ್ತಾಂತರ ಒಪ್ಪಂದದ ಅಡಿಯಲ್ಲಿ ರಾಣಾನನ್ನು ಭಾರತಕ್ಕೆ ಕಳುಹಿಸಬಹುದು ಎಂದು ಯುಎಸ್ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.