ನೆಲಮಂಗಲ: ಕ್ರಿಕೆಟ್ ಟೂರ್ನಿಯ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ಯುವಕನಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿರುವ ಘಟನೆ ನೆಲಮಂಗಲದ ಕೊಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ.
22 ವರ್ಷದ ಕಿರಣ್ ವಿದ್ಯುತ್ ಶಾಕ್ಗೆ ಬಲಿಯಾದ ಯುವಕನಾಗಿದ್ದು, ಮಧ್ಯಾಹ್ನದ ವೇಳೆಗೆ ಘಟನೆ ನಡೆದಿದೆ. ಇಂದು ಮಂಚೇನಹಳ್ಳಿ ಕ್ರಾಸ್ ಬಳಿ ಕ್ರಿಕೆಟ್ ಟೂರ್ನಿ ಏರ್ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೃತ ಕಿರಣ್ ಸ್ಥಳದಲ್ಲಿ ಅಳವಡಿಸಿದ್ದ ಮೈಕಿನಲ್ಲಿ ಮಾತನಾಡುತ್ತಿದ್ದ.
ಕ್ರಿಕೆಟ್ ಮೈದಾನದ ಬಳಿ ಟೂರ್ನಿಯ ಬಗ್ಗೆ ಮಾಹಿತಿ ನೀಡಲು ಮೈಕ್ ಅಳವಡಿಸಲಾಗಿತ್ತು. ಕಿರಣ್ ಪಂದ್ಯದಲ್ಲಿ ವೇಳೆ ಮಾಹಿತಿ ನೀಡುತ್ತಿದ್ದರು. ಈ ವೇಳೆ ಅವರಿಗೆ ವಿದ್ಯುತ್ ಶಾಕ್ ತಗುಲಿತ್ತು. ಕೂಡಲೇ ವಿದ್ಯುತ್ ತಂತಿಯನ್ನ ಕಿತ್ತೆಸೆದು ಕಿರಣ್ನನ್ನು ಆಸ್ಪತ್ರೆಗೆ ಕರೆತರುವ ಪ್ರಯತ್ನ ನಡೆಸಿದ್ದೆವು. ಆದರೆ ಮಾರ್ಗ ಮಧ್ಯದಲ್ಲೇ ಕಿರಣ್ ಸಾವನ್ನಪ್ಪಿದ್ದಾಗಿ ಆತನ ಗೆಳೆಯರು ಮಾಹಿತಿ ನೀಡಿದ್ದಾರೆ.
ಸದ್ಯ ಮೃತ ಕಿರಣ್ ಮೃತದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಸ್ಪತ್ರೆಯ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.