ಶಿವಮೊಗ್ಗ: ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ನಾಲ್ವರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು 10 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 22 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಶಿವಮೊಗ್ಗದ ಮೊಹಮ್ಮದ್ ಹ್ಯಾರೀಸ್, ಫಜಲ್, ಸಾಹೀಲ್ ಶೇಟ್ ಹಾಗೂ ಭದ್ರಾವತಿಯ ಸುಹೇಲ್ ಎಂದು ಗುರುತಿಸಲಾಗಿದೆ. ಕಳ್ಳರು ಹಲವು ದಿನಗಳಿಂದ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗೆ ಇಳಿದ ಶಿವಮೊಗ್ಗದ ತುಂಗಾನಗರ ಪೊಲೀಸರು ಕಳವು ಮಾಡಿದ್ದ 22 ಬೈಕ್ ಗಳ ಜೊತೆ 4 ಮಂದಿ ಕಳ್ಳರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಅಂಗವಿಕಲ ಮಹಿಳೆಯನ್ನು ಮದುವೆಯಾಗಿ ಹಣ ದೋಚಿ ಪರಾರಿಯಾದ ಮೌಲ್ವಿ
ಬಂಧಿತ ನಾಲ್ವರು ಆರೋಪಿಗಳ ವಿರುದ್ಧ ತುಂಗಾನಗರ ಠಾಣೆಯಲ್ಲಿ 3, ದೊಡ್ಡಪೇಟೆ ಠಾಣೆಯಲ್ಲಿ 5, ವಿನೋಬನಗರ ಹಾಗೂ ಜಯನಗರ ಠಾಣೆಯಲ್ಲಿ ತಲಾ 2, ಶಿರಾಳಕೊಪ್ಪ ಠಾಣೆಯಲ್ಲಿ 3, ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆ, ಶಿವಮೊಗ್ಗ ಗ್ರಾಮಾಂತರ ಠಾಣೆ ಮತ್ತು ಕುಂಸಿ ಠಾಣೆಯಲ್ಲಿ ತಲಾ 1 ಪ್ರಕರಣ ದಾಖಲಾಗಿತ್ತು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಠಾಣೆಯಲ್ಲಿ 2, ಚಿಕ್ಕಮಗಳೂರು ಜಿಲ್ಲೆಯ ಕಡೂರು ಹಾಗೂ ಬೀರೂರು ಪೊಲೀಸ್ ಠಾಣೆಯಲ್ಲಿ ತಲಾ 1 ಪ್ರಕರಣ ದಾಖಲಾಗಿತ್ತು. ಪೊಲೀಸರ ತಂಡ ಮಾಲ್ ಸಮೇತ ಆರೋಪಿಗಳ ಹಡೆಮುರಿ ಕಟ್ಟಿದ್ದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.