ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಇಂದು ಕಮಲನಗರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಕಮಲನಗರ ತಾಲೂಕಿನ ಬಾವಲಗಾಂವ್ ತಾಂಡಾ ಭೇಟಿಯಿಂದ ಆರಂಭಿಸಿ, 14ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಪಂಚಾಯತ್ ರಾಜ್ ಎಂಜಿನಿಯರಿಂಗ್, ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಯೋಜನೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸೇರಿದಂತೆ ವಿವಿಧ ಯೋಜನೆಗಳಡಿ ಅಂದಾಜು 22 ಕೋಟಿ ರೂ.ಮೊತ್ತದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.
4.95 ಕೋಟಿ ವೆಚ್ಚದಲ್ಲಿ ಡೋಂಗರಗಾಂವ್ ಕ್ರಾಸ್-ಹುಲ್ಯಾಳ ರಸ್ತೆ ಅಭಿವೃದ್ಧಿ, 4.89 ಕೋಟಿ ರೂ. ವೆಚ್ಚದಲ್ಲಿ ಚೀಮೇಗಾಂವ್ ಕ್ರಾಸ್-ಹುಲ್ಯಾಳ ರಸ್ತೆ ಅಭಿವೃದ್ಧಿ, 4 ಕೋಟಿ ರೂ. ವೆಚ್ಚದಲ್ಲಿ ಮದನೂರ-ಕಮಲನಗರ ರಸ್ತೆ, ಭವಾನಿ ನಗರದ ಬಾವಲಗಾಂವ್ ತಾಂಡಾದಲ್ಲಿ, ದಾಬಕಾ ಮತ್ತು ಹಂದಿಕೇರಾ ಗ್ರಾಮಗಳಲ್ಲಿ ತಲಾ 15 ಲಕ್ಷ ರೂ. ಮೊತ್ತದಲ್ಲಿ ಹಳೆಯ ಅಂಗನವಾಡಿ ಕಟ್ಟಡವನ್ನು ತೆರವುಗೊಳಿಸಿ, ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಕಮಲನಗರ ತಾಲೂಕಿನಲ್ಲಿ ವಿಶೇಷ ಆದ್ಯತೆ ನೀಡಿದ ಎಲ್ಲ ಕಡೆಗಳಲ್ಲಿನ ರಸ್ತೆ ಕಾಮಗಾರಿಗಳು ಉತ್ತಮ ಗುಣಮಟ್ಟದ್ದಾಗಿ ನಡೆಯಬೇಕು. ಕಾಲಮಿತಿಯೊಳಗೆ ಕಾಮಗಾರಿಗಳು ಪೂರ್ಣಗೊಳ್ಳಲು ಒತ್ತು ಕೊಡಬೇಕು ಎಂದು ವಿವಿಧ ಇಲಾಖೆಗಳ ಇಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಸುರೇಶ್ ಭೋಸ್ಲೆ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಮಾಣಿಕ್ರಾವ್ ಪಾಟೀಲ್, ಪಂಚಾಯತ್ ರಾಜ್ ಇಂಜಿನಿಯರ್ ಅಶೋಕ ಸಜ್ಜನಶೆಟ್ಟಿ ಸೇರಿದಂತೆ ಇತರರು ಇದ್ದರು.