ಮಂಡ್ಯ: ಜಿಲ್ಲೆಯ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಶಿವರಾಮೇಗೌಡ ಅವರ ಮಗಳ ಮದುವೆ ಇಂದು ನಡೆಯಲಿದೆ.
ಬುಧವಾರ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಶಿವರಾಮೇಗೌಡರ ಪುತ್ರಿ ಭವ್ಯ ಮತ್ತು ರಾಜೀವ್ ಮದುವೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕರು ಮಂಡ್ಯ ವಿಭಾಗದಿಂದ ಸುಮಾರು 216 ಕೆ ಎಸ್ ಆರ್ ಟಿಸಿ ಬಸ್ ಬುಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮಂಡ್ಯ, ನಾಗಮಂಗಲ, ಮಳವಳ್ಳಿ, ಪಾಂಡವಪುರ, ಕೆ ಆರ್ ಪೇಟೆ, ಮದ್ದೂರು, ಚನ್ನರಾಯಪಟ್ಟಣ ಹಾಗೂ ತುರುವೆಕೆರೆ ಡಿಪೋಗಳಿಂದ ಬಸ್ ಗಳು ಇಂದು ಮುಂಜಾನೆ ಸುಮಾರು 5 ಗಂಟೆಯಿಂದಲೇ ಬೆಂಗಳೂರಿನತ್ತ ಹೊರಟಿವೆ. ಇನ್ನು ಬಸ್ ಗಳ ಜೊತೆ ನೂರಾರು ಕಾರುಗಳಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ.
ನಾಗಮಂಗಲ ತಾಲೂಕಿನ ಹಳ್ಳಿಗಳಿಂದ ಮಗಳ ಮದುವೆಗೆ ಬರುವವರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಏಕಕಾಲಕ್ಕೆ ಸುಮಾರು 216 ಬಸ್ ನೀಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದ್ದು, ಇಂದು ಮಂಡ್ಯ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಸ್ ಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ.
ಬಾಡಿಗೆ ಪಡೆದು ಏಕಕಾಲಕ್ಕೆ ಬೃಹತ್ ಪ್ರಮಾಣದ ಬಸ್ ಮದುವೆಗೆ ನೀಡಿದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಶಿವರಾಮೇಗೌಡರು ಇಲಾಖೆಯ ಲಾಭದ ಜೊತೆಗೆ ಸಾರ್ವಜನಿಕರ ಹಿತ ಮರೆತರಾ ಎಂಬ ಚರ್ಚೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಈ ಹಿಂದೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆಗೆ ಮಾಡಿಸಿದ್ದ ವಿಶೇಷ ಆಹ್ವಾನ ಪತ್ರಿಕೆ ಮಾದರಿಯಲ್ಲೇ ಶಿವರಾಮೇಗೌಡ ಅವರು ತಮ್ಮ ಮಗಳ ಮದುವೆಗೆ ವಿಡಿಯೋ ಹಾಡೊಂದನ್ನು ಮಾಡಿಸಿದ್ದಾರೆ. ಹಾಡು, ಡ್ಯಾನ್ಸ್, ಗೀತೆ ಸಂಯೋಜನೆಯೊಂದಿಗೆ ವಿಶೇಷ ಡಿಜಿಟಲೈಸ್ಡ್ ಚಿತ್ರೀಕರಣ ಮಾಡಲಾಗಿದೆ. ವಿಡಿಯೋದಲ್ಲಿ ಶಿವರಾಮೇಗೌಡರ ಕುಟುಂಬ ಸದಸ್ಯರು ಕಾಣಿಸಿಕೊಂಡಿದ್ದು, ಮದುವೆಗೆ ವಿಶೇಷ ಆಹ್ವಾನ ಕೋರಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
https://www.youtube.com/watch?v=DFbodv3fXdw