– ಬಡವರಿಗೆ ಮನೆ ಕೊಡೋ ಕೆಲಸ ಮಾಡ್ತೀವಿ
ಬೆಂಗಳೂರು: 2021ರ ಜೂನ್ ಒಳಗೆ 25 ಸಾವಿರ ಮನೆ ಆಗದೇ ಹೋದ್ರೆ ನಾನು ರಾಜಕೀಯವೇ ಮಾಡಲ್ಲ. ವಸತಿ ಇಲಾಖೆಗೆ ರಾಜೀನಾಮೆ ಕೊಡ್ತೀನಿ. ಇದನ್ನು ಸವಾಲಾಗಿ ತೆಗೆದುಕೊಳ್ಳುತ್ತೇನೆ ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ವಸತಿ ಇಲಾಖೆಗೆ ಸಂಬಂಧಿಸಿದಂತೆ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಮನೆಗಳ ನಿರ್ಮಾಣದ ಕುರಿತು ಚರ್ಚೆ ನಡೆಯಿತು. ಸಭೆ ಬಳಿಕ ಮಾತನಾಡಿದ ಸಚಿವರು, ಸಿಎಂ ಒಂದು ಲಕ್ಷ ಮನೆ ಯೋಜನೆ ಸಂಬಂಧ ಸಭೆ ಮಾಡಿದ್ದೇವೆ. ಬೆಂಗಳೂರು ಡಿಸಿ, ತಹಶೀಲ್ದಾರ್, ಸರ್ವೆ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳ ಸಭೆ ಮಾಡಲಾಗಿದೆ. 43 ಸಾವಿರ ಮನೆ ಈಗಾಗಲೇ ಪ್ರಾರಂಭ ಆಗಲಿದೆ. ಇದಕ್ಕಾಗಿ 221 ಎಕರೆ ಜಾಗ ನಗರ, ಜಿಲ್ಲೆ ಈಗಾಗಲೇ ನೀಡಿದೆ. 328 ಎಕರೆ ಜಾಗ ನಮ್ಮ ಕೈಗೆ ಸಿಗಬೇಕಿದೆ. ಇನ್ನೊಂದು ವಾರದಲ್ಲಿ ಈ ಜಾಗ ನಮಗೆ ಸಿಗಲಿದೆ ಎಂದರು.
ಒಟ್ಟು 900 ಎಕರೆ ಜಾಗ ಒಂದು ಲಕ್ಷ ಮನೆ ಯೋಜನೆಗೆ ಸಿಗಲಿದೆ. 35 ಸಾವಿರ ಹೊಸ ಮನೆಗೆ ಒಂದು ವಾರದಲ್ಲಿ ಟೆಂಡರ್ ಕರೆಯುತ್ತೇವೆ. 2021ರ ಜೂನ್ ಒಳಗೆ 25-30 ಸಾವಿರ ಮನೆ ಬಡವರಿಗೆ ಕೊಡ್ತೀವಿ. ಈಗಾಗಲೇ 31 ಸಾವಿರ ಫಲಾನುಭವಿಗಳು ಅರ್ಜಿ ಹಾಕಿದ್ದಾರೆ. ಇನ್ನೊಂದು ವಾರದಲ್ಲಿ ಮತ್ತೆ ಆನ್ಲೈನ್ ಮೂಲಕ ಅರ್ಜಿ ಕರೆಯುತ್ತೇವೆ. ಬಡವರಿಗೆ ಮನೆ ಕೊಡುವ ಕೆಲಸ ಮಾಡ್ತೀವಿ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಶ್ರೀಮತಿ ಬಿಟ್ಟು ನನಗೆ ಸಂಜನಾ, ರಾಗಿಣಿ ಗೊತ್ತಿಲ್ಲ: ವಿ. ಸೋಮಣ್ಣ
2021ರ ಜೂನ್ ಒಳಗೆ 25-30 ಸಾವಿರ ಮನೆ ಕೊಡ್ತೀವಿ. ಉಳಿದ ಮನೆ 2022 ರಲ್ಲಿ ಪೂರ್ಣ ಮಾಡ್ತೀವಿ. ಜೂನ್ ಒಳಗೆ 25 ಸಾವಿರ ಮನೆ ಆಗದೇ ಹೋದ್ರೆ ನಾನು ರಾಜಕೀಯವೇ ಮಾಡೊಲ್ಲ. ವಸತಿ ಇಲಾಖೆಗೆ ನಾನು ರಾಜೀನಾಮೆ ಕೊಡ್ತೀನಿ. ಇದನ್ನ ಚಾಲೆಂಜ್ ಆಗಿ ತಗೋತೀನಿ ಅಂದ್ರು.
ಕಳೆದ ವರ್ಷ ಬಿದ್ದ ಮನೆಗೆ ಹಣ ಬಿಡುಗಡೆ ಮಾಡಿಲ್ಲ ಅನ್ನೊ ಆರೋಪ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಈಗಾಗಲೇ 1400 ಕೋಟಿ ಹಣ ಕಳೆದ ಬಾರಿ ಮಳೆಗೆ ಬಿದ್ದ ಮನೆಗಳಿಗೆ ಹಣ ಕೊಟ್ಟಿದ್ದೇವೆ. ಆದ್ಯತೆ ಮೇಲೆ ಹಣ ಬಿಡುಗಡೆ ಮಾಡ್ತಾನೆ ಇದ್ದೇವೆ. ಹಂತ ಹಂತವಾಗಿ ಹಣ ಬಿಡುಗಡೆ ಮಾಡ್ತಾನೆ ಇದ್ದೇವೆ ಎಂದು ಹೇಳಿದರು.