– ಭಾರೀ ತೊಂದರೆಯ ಮುನ್ಸೂಚನೆ ಎಂದು ಜ್ಯೋತಿಷಿಗಳು
ಬೆಂಗಳೂರು: ವರ್ಷದ ಆರಂಭದಲ್ಲಿಯೇ ಅಪಶಕುನದ ಮುನ್ಸೂಚನೆ ಕೇಳಿ ಬಂದಿದೆ. ಇಡೀ ಜಗತ್ತು ಯುದ್ಧದ ಭೀಕರತೆಯಿಂದ ಅಲ್ಲೋಲ ಕಲ್ಲೋಲವಾಗಬಹುದು. ಕೊರೊನಾದಿಂದ ಹೇಗೆ ಸಾವು-ನೋವುಗಳು ಸಂಭವಿಸಿತೋ ಅದೇ ರೀತಿ ಈ ಬಾರಿಯೂ ಸಾವಿನ ಮಹಾಯಜ್ಞ ಸಂಭವಿಸಬಹುದು ಅಂತ ವೈದಿಕರೇ ಭವಿಷ್ಯ ನುಡಿದಿದ್ದಾರೆ.
ಮಕರ ಸಂಕ್ರಾಂತಿಯಂದು ಸೂರ್ಯ ತನ್ನ ಪಥವನ್ನ ಬದಲಾವಣೆ ಮಾಡುವ ದಿನ. ಪ್ರತೀವರ್ಷ ಮಕರಸಂಕ್ರಮಣ ದಿನದಂದು ಬೆಂಗಳೂರಿನ ಗವಿಗಂಗಾದರೇಶ್ವರ ದೇವಸ್ಥಾನದ ಶಿವಲಿಂಗವನ್ನ ಸೂರ್ಯ ಕಿರಣಗಳು ಸ್ಪರ್ಶಿಸುತ್ತಿತ್ತು. ನಾಲ್ಕೈದು ನಿಮಿಷಗಳ ಕಾಲ ಸಂಭವಿಸೋ ಈ ಸೂರ್ಯ ಚಮತ್ಕಾರನ ಸಾವಿರಾರು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದರು. ಈ ವರ್ಷವೂ ಭಕ್ತಗಣ, ದೇವಾಲಯದಲ್ಲಿ ಅರ್ಚಕರು ಸೂರ್ಯನನ್ನು ಎದುರು ನೋಡ್ತಿದ್ರು. ಆದರೆ ಈ ಬಾರಿ ಸೂರ್ಯ ರಶ್ಮಿ ಸ್ಪರ್ಶಿಸಲಿಲ್ಲ. ಅಗೋಚರವಾಗಿಯೇ ಸೂರ್ಯ ತನ್ನ ಪಥ ಬದಲಿಸಿದ.
ಸೂರ್ಯ ಗೋಚರಿಸದೇ, ಕಿರಣಗಳನ್ನು ಶಿವಲಿಂಗಕ್ಕೆ ಸ್ಪರ್ಶಿಸದೇ ಪಥ ಬದಲಿಸಿದ್ದು ಮಹಾ ಗಂಡಾಂತರದ ಮುನ್ಸೂಚನೆ ಅಂತಾ ಹೇಳಲಾಗ್ತಿದೆ. 53 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸದೆ ಪಥ ಬದಲಿಸಿಕೊಂಡಿದ್ದಾನೆ. ಅಗೋಚರವಾಗಿ ಈಶ್ವರನಿಗೆ ಪೂಜೆ ಸಲ್ಲಿಸಿ ಭಾಸ್ಕರ ಹೊರಟಿದ್ದಾನೆ ಅಂತ ಗವಿಗಂಗಾಧರೇಶ್ವರ ದೇಗುಲದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ.
ಇದು ಮತ್ತೊಂದು ಆತಂಕದ ಅಲೆ ಎಬ್ಬಿಸಿದೆ. 2021ರಲ್ಲಿಯೂ ಕೂಡ 2020ರಲ್ಲಿ ನಡೆದಂತೆ ಸಾವು-ನೋವು ಸಂಭವಿಸಲಿದ್ಯಾ..? ಜಗತ್ತೇ ಅಲ್ಲೋಲ ಕಲ್ಲೋಲವಾಗಲಿದೆಯಾ..? ಸೋಮಸುಂದರ್ ದೀಕ್ಷಿತ್ ಗುರೂಜಿ ಹೇಳಿದಂತೆ ಯುದ್ಧಕಾಂಡದಿಂದ ರಕ್ತಪಾತವೇ ನಡೆದೋಗುತ್ತಾ ಅನ್ನೋ ಹಲವು ಭಯಗಳು ಕಾಡ್ತಿವೆ. ಈ ಗಂಡಾಂತರ ನಿವಾರಣೆಗೆ ಅಂತಿಂಥ ಯಾಗವಲ್ಲ, ಮಹಾರುದ್ರಯಾಗ ನಡೆಸೋದು ಸೂಕ್ತ ಅಂತಾನೂ ಎಚ್ಚರಿಸಿದ್ದಾರೆ.
ಪ್ರಕೃತಿಯಲ್ಲಾದ ಸಣ್ಣ ಬದಲಾವಣೆ, ಸೂರ್ಯನ ಕಿರಣ ಈಶ್ವರನ ಮೇಲೆ ಬೀಳದಂತೆ ಮಾಡಿದೆ. ಹೀಗಾಗಿ ಈ ಘಟನೆಯಿಂದ ಈ ವರ್ಷವೂ ಮತ್ತೇನಾದ್ರೂ ಅನಾಹುತಗಳು ಆಗಿಬಿಡ್ತಾವಾ ಎಂಬ ಭಯ ಕಾಡತೊಡಗಿದೆ. ಕಳೆದ ವರ್ಷ ವಿಶ್ವವೇ ಕೊರೋನಾ ಹೊಡೆತಕ್ಕೆ ತತ್ತರಿಸಿತ್ತು. ಈಗ ಲಸಿಕೆ ಸಿಕ್ಕಿದೆ. ಎಲ್ಲಾ ಮುಗೀತು ಅನ್ನುವಷ್ಟರಲ್ಲಿ ಈ ಗಂಡಾಂತರ ಮುನ್ಸೂಚನೆ ಮತ್ತಷ್ಟು ದಿಗ್ಭ್ರಾಂತಗೊಳಿಸಿದೆ.