ಬೆಂಗಳೂರು: 2019ರ ಲೋಕಸಭಾ ಚುನಾವಣೆಗೆ ನನ್ನ ತವರೂರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಮಂಡ್ಯದ ಜನರು ನನ್ನ ಕೈ ಹಿಡಿಯುತ್ತಾರೆ. ಒಂದು ವೇಳೆ ಕೈ ಬಿಟ್ಟರೂ ಅದಕ್ಕೆ ಬಲವಾದ ಕಾರಣ ಇರುತ್ತದೆ ಎಂದು ನಟ ಹುಚ್ಚ ವೆಂಕಟ್ ಹೇಳಿದ್ದಾರೆ.
ನೆಲಮಂಗಲದ ಮಾರುತಿನಗರದಲ್ಲಿ ಗಣೇಶ ಚತುರ್ಥಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಮಂಡ್ಯ ಜೆಡಿಎಸ್ ಭದ್ರಕೋಟೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ನನಗೆ ಮಾತ್ರ ಮಂಡ್ಯ ಭದ್ರ ಕೋಟೆ ಎಂದ ಅವರು, ರಾಜ್ಯ ಸಮ್ಮಿಶ್ರ ಸರ್ಕಾರ ಶೀಘ್ರವೇ ಪತನವಾಗುತ್ತದೆ. ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದು ರಾಜ್ಯ ಸರ್ಕಾರಕ್ಕೆ ತೊಂದರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಅವರು ಮತ್ತೇ ಪ್ರಧಾನಿ ಆಗುತ್ತಾರೆ ಎಂದ ಹುಚ್ಚ ವೆಂಕಟ್, ತಕ್ಷಣವೇ ಮಾತು ಬದಲಿಸಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅವಕಾಶ ಕೊಟ್ಟರೆ ತಪ್ಪೇನು ಇಲ್ಲ ಎಂದರು.
ವೇದಿಕೆ ಮೇಲೆ ಡೈಲಾಗ್ ಹೇಳುತ್ತಿದ್ದಾಗ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬರಿಗೆ ಕ್ಲಾಸ್ ತೆಗೆದುಕೊಂಡ ಹುಚ್ಚ ವೆಂಕಟ್, ನಾನು ನಿನಗಿಂತ ಜಾಸ್ತಿನೇ ಕುಡಿಯುತ್ತೇನೆ ಕಣೋ. ಕುಡಿದಿರುವೆ ಅಂತಾ ಜಾಸ್ತಿ ಮಾತನಾಡಬಾರದು, ಸುಮ್ಮನೆ ನಿಂತಕೋ ಎಂದು ಖಡಕ್ ವಾರ್ನಿಂಗ್ ಕೊಟ್ಟರು.
ಬಳಿಕ ಕಾರ್ಯಕ್ರಮ ಆಯೋಜಕರು ಹುಚ್ಚ ವೆಂಕಟ್ಗೆ ಸನ್ಮಾನ ಮಾಡಿ, ಪ್ರಶಸ್ತಿ ನೀಡಿದ್ದಾರೆ. ಅಲ್ಲಿಂದ ಹೊರ ಬಂದ ಹುಚ್ಚವೆಂಕಟ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯುವಕರ ದಂಡೇ ಮುಗಿಬಿದ್ದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv