ಚೆನ್ನೈ: ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರ ಸಭೆಗಳಿಗೆ ಜನರನ್ನು ಬಾಡಿಗೆ ವಾಹನದ ಮೂಲಕ ಕರೆ ತರುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.
ಮದುರೈ ಮೂಲದ ಕಾರ್ಯಕರ್ತ ಕೆ.ವಿ.ರಮೇಶ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾ.ಕಿರುಬಕರನ್ ಮತ್ತು ನ್ಯಾ.ಎಸ್ಎಸ್ ಸುಂದರ್ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶವನ್ನು ಪ್ರಕಟಿಸಿದ್ದಾರೆ.
ಲೋಕಸಭೆ ಚುನಾವಣಾ ಪ್ರಚಾರ ಸಭೆಗಳಿಗೆ ರಾಜಕೀಯ ಪಕ್ಷಗಳು ಜನರನ್ನು ಸೇರಿಸಲು ಅವರನ್ನು ಬಾಡಿಗೆ ರೂಪದ ಟ್ರಕ್, ಬಸ್ ಹಾಗೂ ವ್ಯಾನ್ಗಳಲ್ಲಿ ಕರೆತರುವಂತಿಲ್ಲ. ಈ ಸಂಬಂಧ ಮಾರ್ಚ್ 27ರೊಳಗೆ ಈ ಆದೇಶಕ್ಕೆ ತಮ್ಮ ಪ್ರತಿಕ್ರಿಯೆಯನ್ನು ತಿಳಿಸಬೇಕೆಂದು ರಾಜಕೀಯ ಪಕ್ಷಗಳಿಗೆ ಕೋರ್ಟ್ ಸೂಚನೆ ನೀಡಿದೆ.
ಇದರ ಜೊತೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಬ್ಯಾನರ್ ಹಾಕುವಂತಿಲ್ಲ ಎಂದು ರಾಜಕೀಯ ಪಕ್ಷಗಳಿಗೆ ಮಧ್ಯಂತರ ಆದೇಶ ಹೊರಡಿಸಿ ತಾಕೀತು ಮಾಡಿದೆ. ಈ ವೇಳೆ ವೋಟಿಗಾಗಿ ಹಣವನ್ನು ಪಡೆದುಕೊಂಡವರು ಮತ್ತು ಹಣವನ್ನು ನೀಡಿದವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಕೋರ್ಟ್ ಚುನಾವಣಾ ಆಯೋಗಕ್ಕೆ ಆದೇಶಿಸಿದೆ.
2016ರ ತಮಿಳುನಾಡು ಚುನಾವಣೆಯ ವೇಳೆ ಪಕ್ಷ ಒಂದರ ಬಹಿರಂಗ ಸಭೆಯ ವೇಳೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಸಿಎಂ ಜಯಲಲಿತಾ ಅವರ ಪ್ರಚಾರದ ವೇಳೆ ತಾಪಮಾನ ಜಾಸ್ತಿ ಇದೆ ಎನ್ನುವ ಕಾರಣಕ್ಕೆ ಬಹಿರಂಗ ಸಭೆ ತಡವಾಗಿ ಆರಂಭವಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv