– ಸಾಧನೆಗಳ ಪ್ರಚಾರಕ್ಕೆ ವಿನೂತನ ಸ್ಟುಡಿಯೋ
ಬೆಂಗಳೂರು: ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತ್ತು. ಇದೀಗ 2018ರ ಎಲೆಕ್ಷನ್ ಗೆ ಹೊಸ ಐಡಿಯಾದೊಂದಿಗೆ ಪ್ರಚಾರ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ಲಾನ್ ರೆಡಿಯಾಗಿದೆ.
ಯೆಸ್, ಸಿಎಂ ಸಿದ್ದರಾಮಯ್ಯ 2018ರ ದಾರಿಯನ್ನೇ ಗುರಿಯಾಗಿಸಿಕೊಂಡಿದ್ದಾರೆ. ಬಿಜೆಪಿಯ ಮಿಷನ್ 150 ಟಾರ್ಗೆಟ್ ಘೋಷಣೆಗೆ ತಡೆಗೋಡೆ ಕಟ್ಟಲು ಸಾಕಷ್ಟು ರಣತಂತ್ರಗಳನ್ನು ರೂಪಿಸುತ್ತಿದ್ದಾರೆ. ಅದರಲ್ಲಿ ಸ್ಮಾರ್ಟ್ ಪಬ್ಲಿಸಿಟಿಯೂ ಒಂದು. ಸಿದ್ದರಾಮಯ್ಯ ನೇತೃತ್ವದ ಕೈ ಸರ್ಕಾರ ಪ್ರಚಾರದಲ್ಲಿ ಹಿಂದೆ ಅನ್ನೋ ಅಭಿಪ್ರಾಯಗಳು ಇವೆ. ಈ ಬಗ್ಗೆ ಕಾಂಗ್ರೆಸ್ ನಾಯಕರ ಮಹತ್ವದ ಸಭೆಯಲ್ಲೂ ಬಿಸಿ ಬಿಸಿ ಚರ್ಚೆಯಾಗಿದೆ. ಹಾಗಾಗಿಯೇ ಸರ್ಕಾರದ ಯೋಜನೆಗಳ ಪ್ರಚಾರಕ್ಕೆ ಒತ್ತು ಕೊಡಬೇಕು ಎಂಬ ಸೂಚನೆಯೂ ಹೈಕಮಾಂಡ್ ನಿಂದ ಬಂದಿದೆ. ಅದಕ್ಕಾಗಿಯೇ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ತಯಾರಾಗಿದೆ ಹೈಟೆಕ್ ಸ್ಟುಡಿಯೋ.
ಇದೀಗ ಮುಖ್ಯಮಂತ್ರಿಯವರು ಈ ಸ್ಟುಡಿಯೋದಿಂದಲೇ ಹೈಟೆಕ್ ಪ್ರಚಾರಕ್ಕೆ ಮುಂದಾಗಿದ್ದಾರೆ. ಗೃಹ ಕಚೇರಿ ಕೃಷ್ಣಾದ ಆವರಣದಲ್ಲಿ ಸ್ಟುಡಿಯೋ ನಿರ್ಮಾಣವಾಗಿದೆ. ಸ್ಟುಡಿಯೋ ಒಳಗೆ ಸಂದರ್ಶನಕ್ಕೆ, ಪ್ರಚಾರ ಭಾಷಣ ರೆಕಾರ್ಡಿಂಗ್ ಗೆ, ಜಾಹೀರಾತು ಶೂಟಿಂಗ್ ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಎಡಿಟಿಂಗ್ ವ್ಯವಸ್ಥೆಯೂ ಕೂಡ ಇದೆ. ಈ ಸ್ಟುಡಿಯೋ ಮೂಲಕವೇ ಸಿಎಂ ಸಿದ್ದರಾಮಯ್ಯ ತಮ್ಮ ಸರ್ಕಾರದ ಯೋಜನೆಗಳನ್ನ ಜನರಿಗೆ ತಲುಪಿಸಲು ಪ್ಲಾನ್ ಮಾಡಿದ್ದಾರೆ. ಫೇಸ್ ಬುಕ್, ಟ್ವೀಟರ್, ಯೂಟೂಬ್ ಸೇರಿದಂತೆ ಎಲ್ಲ ಕಡೆಗಳಲ್ಲೂ ಪ್ರಚಾರ ಶುರು ಮಾಡಲಿದ್ದಾರೆ. ಅದಕ್ಕೆ ಈ ಸ್ಟುಡಿಯೋ ಬಳಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಚುನಾವಣೆಗೆ ವರ್ಷ ಆರಂಭವಾಗಿದ್ದು ಜನರನ್ನು ತಲುಪಲು ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಈ ಮೂಲಕ ಎಷ್ಟರ ಮಟ್ಟಿಗೆ ಜನರನ್ನು ತಲುಪುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.