ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ಇತಿಹಾಸ. ಆದರೆ ಈ ಟೂರ್ನಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶನ ನೀಡಿದ್ದ ಯುವರಾಜ್ ಸಿಂಗ್ ಟೀಂ ಇಂಡಿಯಾ ನಾಯಕನಾಗುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ವಿಚಾರ ಈಗ ಬಯಲಾಗಿದೆ.
ಏಕದಿನ ಕ್ರಿಕೆಟ್ನಲ್ಲಿ ಮಿಂಚುತ್ತಿದ್ದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಜಹೀರ್ ಖಾನ್ ಸೇರಿದಂತೆ ಭಾರತದ ಹಿರಿಯ ಕ್ರಿಕೆಟಿಗರ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಟಿ20ಗೆ ಮುನ್ನಡೆಸುವವರು ಯಾರು ಎಂಬ ಚರ್ಚೆ ನಡೆದಿತ್ತು. ಈ ವೇಳೆ ನನಗೆ ನಾಯಕನ ಪಟ್ಟ ಸಿಗಬಹುದು ಎಂಬ ನಿರೀಕ್ಷೆಯನ್ನು ನಾನು ಇಟ್ಟುಕೊಂಡಿದ್ದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ‘ಯುವಿ ಬೆನ್ನಿಗೆ ಧೋನಿ, ಕೊಹ್ಲಿ ಚೂರಿ ಹಾಕಿದ್ದರು’- ಯುವರಾಜ್ ಸಿಂಗ್ ತಂದೆ ಆರೋಪ
ಈ ಬಗ್ಗೆ ಮಾತನಾಡಿದ ಯುವಿ, ಭಾರತವು 50 ಓವರ್ ಗಳ ವಿಶ್ವಕಪ್ ಅನ್ನು ಕಳೆದುಕೊಂಡಿತ್ತು. ಅಲ್ಲದೇ ಎರಡು ತಿಂಗಳ ಇಂಗ್ಲೆಂಡ್ ಪ್ರವಾಸವಿತ್ತು. ಬಳಿಕ ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ನಡುವೆ ಒಂದು ತಿಂಗಳ ಪ್ರವಾಸವೂ ಇತ್ತು. ತದನಂತರ ಒಂದು ತಿಂಗಳು ಟಿ 20 ವಿಶ್ವಕಪ್ ನಿಗದಿಯಾಗಿತ್ತು. 4 ತಿಂಗಳ ಕಾಲ ಮನೆಯಿಂದ ದೂರ ಇದ್ದ ಹಿನ್ನೆಲೆಯಲ್ಲಿ ಹಿರಿಯ ಆಟಗಾರರು ವಿರಾಮ ಪಡೆಯಲು ಬಯಸಿದ್ದರು ಮತ್ತು ಯಾರೂ ಟಿ 20ಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಸಂದರ್ಭದಲ್ಲಿ ಟಿ20 ವಿಶ್ವಕಪ್ಗೆ ನನ್ನನ್ನು ಭಾರತದ ತಂಡದ ನಾಯಕನನ್ನಾಗಿ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ಎಂಎಸ್ ಧೋನಿ ಅವರನ್ನು ನಾಯಕನಾಗಿ ಘೋಷಿಸಲಾಯಿತು ಎಂದು ತಿಳಿಸಿದರು.
ನಾಯಕನಾಗಿ ಆಯ್ಕೆಯಾದ ನಂತರ ನನ್ನ ಮತ್ತು ಧೋನಿ ನಡುವಿನ ಸಂಬಂಧದ ಬಗ್ಗೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಅವರು, ನಾನು ಯಾವಾಗಲೂ ನಾಯಕನ ಹಿಂದೆ ಇರುತ್ತೇನೆ ಎಂದು ಹೇಳಿದರು.
2007ರ ವಿಶ್ವಕಪ್ ಬಳಿಕ ಭಾರತ ಯುವ ತಂಡವಾಗಿದೆ. ಆ ವೇಳೆ ಲಾಲ್ಚಂದ್ ರಜಪೂತ್ ನಮ್ಮ ಕೋಚ್ ಆಗಿದ್ದರು ಮತ್ತು ವೆಂಕಟೇಶ್ ಪ್ರಸಾದ್ ನಮ್ಮ ಬೌಲಿಂಗ್ ಕೋಚ್ ಆಗಿದ್ದರು. ಯುವ ನಾಯಕ ಮುನ್ನಡೆಸುತ್ತಿದ್ದ ಯುವ ತಂಡವಾಗಿತ್ತು. ಈ ಟೂರ್ನಿ ವೇಳೆ ನಮ್ಮ ಬಳಿ ಹೆಚ್ಚಿನ ತಂತ್ರಗಾರಿಕೆ ಇತ್ತು ಎಂದು ನಾನು ಭಾವಿಸುವುದಿಲ್ಲ. ಟಿ20 ತಂತ್ರಗಳ ಬಗ್ಗೆ ಯಾರಿಗೂ ಸುಳಿವು ಇರಲಿಲ್ಲ. ಯಾಕೆಂದರೆ ಇದು ಮೊದಲ ಪಂದ್ಯಾವಳಿ ಆಗಿತ್ತು. ಹೀಗಾಗಿ ನಾವು ನಮಗೆ ತಿಳಿದ ರೀತಿಯಲ್ಲಿ ಹೋಗಿ ಆಡಲು ಮುಂದಾದೆವು ಎಂದು ಅಂದಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಈ ವಿಶ್ವಕಪ್ನಲ್ಲಿ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ ಅವರ ಓವರಿನ 6 ಎಸೆತಗಳನ್ನು ಯುವರಾಜ್ ಸಿಕ್ಸರ್ ಗೆ ಅಟ್ಟಿ ವಿಶ್ವದಾಖಲೆ ನಿರ್ಮಿಸಿದ್ದರು. ಈ ಪಂದ್ಯದಲ್ಲಿ ಯುವರಾಜ್ 16 ಎಸೆತಗಳಲ್ಲಿ 58 ರನ್ ಚಚ್ಚಿದ್ದರು. ಆಸ್ಟ್ರೇಲಿಯಾ ವಿರುದ್ಧ ಸೆಮಿ ಫೈನಲ್ ಪಂದ್ಯದಲ್ಲಿ ಯುವಿ 30 ಎಸೆತಗಳಲ್ಲಿ 70 ರನ್ ಹೊಡೆದಿದ್ದರು. 5 ಬೌಂಡರಿ, 5 ಸಿಕ್ಸರ್ ಸಿಡಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ್ದರು. ಈ ಆಟಕ್ಕೆ ಪಂದ್ಯಶ್ರೇಷ್ಠ ಗೌರವವನ್ನು ಯುವಿ ಪಡೆದಿದ್ದರು. ಇದನ್ನೂ ಓದಿ: ಬ್ರಾಡಿ, ಓ ನನ್ನ ಗೆಳೆಯ ನೀನೊಂದು ದಂತಕಥೆ: ಯುವರಾಜ್ ಸಿಂಗ್