ಅಲಹಾಬಾದ್: ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನಾವತಿ ಆಯೋಗ ಅಂದಿನ ಸಿಎಂ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದೆ.
2002ರ ಗಲಭೆ ಪ್ರಕರಣ ಸಂಬಂಧ ನಾನಾವತಿ ಆಯೋಗದ ವರದಿ 5 ವರ್ಷದ ಹಿಂದೆ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದು ಇಂದು ಗುಜರಾತ್ ಗೃಹ ಸಚಿವ ಪ್ರದೀಪ್ ಸಿನ್ಹಾ ಜಡೇಜಾ ಅವರು ರಾಜ್ಯ ವಿಧಾನಸಭೆಯಲ್ಲಿ ಮಂಡನೆ ಮಾಡಿದ್ದಾರೆ.
ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ. ಇದು ಪೂರ್ವನಿಯೋಜಿತ ದಂಗೆಯಲ್ಲ. ಈ ದಂಗೆಯನ್ನು ನಿಯಂತ್ರಿಸಲು ಮೋದಿಯವರು ಪ್ರಯತ್ನ ನಡೆಸಿದ್ದರು. ದಂಗೆ ಕುರಿತು ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಸುಳ್ಳು ಹೇಳಿದ್ದಾರೆ ಎಂದು 1500 ಪುಟಗಳ ವರದಿಯಲ್ಲಿ ತಿಳಿಸಿದೆ.
ಪೊಲೀಸರಿಗಿಂತಲೂ ಪ್ರತಿಭಟನಾಕಾರರ ಸಂಖ್ಯೆ ಜಾಸ್ತಿ ಇತ್ತು. ಇದರ ಜೊತೆಗೆ ಪೊಲೀಸರು ಶಸ್ತ್ರಸಜ್ಜಿತರಾಗಿ ಇರಲಿಲ್ಲ. ಈ ಕಾರಣದಿಂದ ಕೆಲವೊಂದು ಪ್ರದೇಶದಲ್ಲಿ ಪೊಲೀಸರು ಗಲಭೆಯನ್ನು ಸರಿಯಾಗಿ ನಿಯಂತ್ರಿಸುವಲ್ಲಿ ವಿಫಲರಾಗಿದ್ದರು ಎಂದು ಹೇಳಿದೆ.
ಏನಿದು ಪ್ರಕರಣ?
2002ರ ಫೆಬ್ರವರಿ 22 ರಂದು ಗೋದ್ರಾದಲ್ಲಿ ಸಬರಮತಿ ಎಕ್ಸ್ ಪ್ರೆಸ್ ರೈಲಿನ ಎಸ್6 ಬೋಗಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಪರಿಣಾಮ ಆಯೋಧ್ಯೆಯಿಂದ ಗುಜರಾತಿಗೆ ಮರಳುತ್ತಿದ್ದ 59 ಕರಸೇವಕರು ಸಜೀವವಾಗಿ ದಹನವಾಗಿದ್ದರು. ಈ ಹತ್ಯಾಕಾಂಡದ ನಂತರ ಗುಜರಾತ್ನ ಅನೇಕ ಕಡೆಗಳಲ್ಲಿ ಕೋಮುಗಲಭೆ ಸಂಭವಿಸಿ 1,200 ಕ್ಕೂ ಹೆಚ್ಚು ಮಂದಿಯ ಹತ್ಯೆಯಾಗಿತ್ತು.
ಗಲಭೆ ಪ್ರಕರಣ ಕುರಿತು 2002ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ನಿವೃತ್ತ ನ್ಯಾ. ನಾನಾವತಿ ಮತ್ತು ಅಕ್ಷಯ್ ಮೆಹ್ತಾ ನೇತೃತ್ವದಲ್ಲಿ ಆಯೋಗವನ್ನು ರಚಿಸಿತ್ತು. ಗುಜರಾತ್ ಸರ್ಕಾರ ಈ ಪ್ರಕರಣದ ತನಿಖೆಗಾಗಿ ರಚಿಸಿದ್ದ ನಾನಾವತಿ ಆಯೋಗದ ವರದಿ ಮೊದಲ ಬಾರಿಗೆ 2008ರಲ್ಲಿ ಮಂಡನೆಯಾಗಿತ್ತು. ಸಬರಮತಿ ಎಕ್ಸ್ಪ್ರೆಸ್ ರೈಲಿನ ಎಸ್-6 ಬೋಗಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಲ್ಲ. ಪೆಟ್ರೋಲ್ ಸುರಿದು ಬೋಗಿಗೆ ಬೆಂಕಿ ಹಚ್ಚಲಾಗಿದೆ. ಇದೊಂದು ಯೋಜಿತ ಪಿತೂರಿಯಾಗಿದ್ದು, ಗೋದ್ರಾ ರೈಲ್ವೇ ಸಮೀಪದಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ಎಂದು ವರದಿಯನ್ನು ಸಲ್ಲಿಸಿತ್ತು. 2014ರಲ್ಲಿ ಆನಂದಿ ಬೆನ್ ನೇತೃತ್ವದ ಸರ್ಕಾರದ ಮುಂದೆ ಅಂತಿಮ ವರದಿಯನ್ನು ಸಲ್ಲಿಸಿತ್ತು.