ರಾಮನಗರ: ಮಾಗಡಿಯ (Magadi) ರೈತರೊಬ್ಬರು (Farmer) ಬೆಳೆದಿದ್ದ 4,000 ಗಂಧದ ಮರಗಳಲ್ಲಿ (Sandalwood) ಸುಮಾರು 2000 ಮರಗಳು ಕಳ್ಳರ ಪಾಲಾಗಿವೆ.
ಮಾಗಡಿ ತಾಲೂಕಿನ ಅತ್ತಿಂಗೆರೆ ಗ್ರಾಮದ ಸೋಮಕ್ಕನಮಠದ ಬಳಿಯ 12 ಎಕರೆ ಜಮೀನಿನಲ್ಲಿ ಪಂಚಲಿಂಗಯ್ಯ ಹಾಗೂ ಸಹೋದರ ಮಹಾಲಿಂಗಯ್ಯ ಎಂಬವರು ಮೈಸೂರು ಸ್ಯಾಂಡಲ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಕಳೆದ 10 ವರ್ಷದಿಂದ ಶ್ರೀಗಂಧ ಬೆಳೆದಿದ್ದರು. ಸುಮಾರು 4 ಸಾವಿರಕ್ಕೂ ಅಧಿಕ ಶ್ರೀಗಂಧದ ಮರಗಳನ್ನು ಬೆಳೆಸಲಾಗಿತ್ತು.
ಇತ್ತೀಚಿಗೆ ಕಳ್ಳರು ರಾತ್ರಿ ವೇಳೆ ತೋಟಕ್ಕೆ ನುಗ್ಗಿ ಶ್ರೀಗಂಧದ ಮರಗಳನ್ನ ಕಡಿದು ಹೊತ್ತೊಯ್ದಿದ್ದಾರೆ. ಸುಮಾರು 2 ಸಾವಿರ ಶ್ರೀಗಂಧದ ಮರಗಳನ್ನ ಕಳ್ಳತನ ಮಾಡಲಾಗಿದೆ. ಇದರಿಂದ ಕೋಟ್ಯಂತರ ರೂ. ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ ರೈತ, ಪೊಲೀಸರ ಮೊರೆ ಹೋಗಿದ್ದಾರೆ.
ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರ ಹಾವಳಿ ತಪ್ಪಿಸುವಂತೆ ಮನವಿ ಮಾಡಲಾಗಿದೆ.