– ಸೋದರಿ ಮೂಲಕ ಪ್ರಿಯಕರನ ಪರಿಚಯ
ನವದೆಹಲಿ: ಮಹಿಳೆಯೊಬ್ಬಳು ತನ್ನ ಪ್ರಿಯಕರ ಮತ್ತು ಆತನ ಸಹೋದರನ ಸಹಾಯದಿಂದ ಪತಿಯನ್ನು ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಪ್ರಿಯಾಂಕಾ (30) ಬಂಧಿತ ಪತ್ನಿ. ಪ್ರಿಯಕರ ವೀರು ಬರ್ಮಾ ತಪ್ಪಿಸಿಕೊಂಡಿದ್ದು, ಆತನ ಸಹೋದರ ಕರಣ್ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಹುದಿನಗಳ ಅನಾರೋಗ್ಯದಿಂದಾಗಿ ಪತಿ ಸಾವನ್ನಪ್ಪಿದ್ದಾನೆ ಎಂದು ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಆರೋಪಿ ಪ್ರಯತ್ನಿಸಿದ್ದಳು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ.
ಕೂಡಲೇ ಆರೋಪಿ ಪ್ರಿಯಾಂಕಾಳನ್ನು ವಶಪಡಿಸಿಕೊಂಡು ವಿಚಾರಣೆ ಮಾಡಿದೆವು. ಆಗ ಆರೋಪಿ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಮಹಿಳೆ ಮತ್ತು ಮೃತ ಪತಿ ನಡುವೆ 20 ವರ್ಷ ವಯಸ್ಸಿನ ಅಂತರವಿತ್ತು. ಈ ದಂಪತಿಗೆ ಮಗು ಕೂಡ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಯಸ್ಸಿನ ಅಂತರದಿಂದ ನನ್ನ ಮದುವೆಯಿಂದ ತಾನು ಸಂತೋಷವಾಗಿರಲಿಲ್ಲ. ಆದ್ದರಿಂದ ವೀರು ಬರ್ಮಾ ಮತ್ತು ಕರಣ್ ಇಬ್ಬರ ಸಹಾಯ ಪಡೆದು ಪತಿಯನ್ನು ಕೊಲೆ ಮಾಡುವ ಪ್ಯಾನ್ ರೂಪಿಸಿದ್ದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಪ್ರಿಯಾಂಕಾ ಆರೋಪಿ ಬರ್ಮಾ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಅಲ್ಲದೇ ಆತನನ್ನೇ ಮದುವೆಯಾಗಲು ಬಯಸಿದ್ದಳು.
ಮುರಾದ್ನಗರದಲ್ಲಿ ತನ್ನ ಸಹೋದರಿ ಮೂಲಕ ವೀರು ಬರ್ಮಾನ ಪರಿಚಯವಾಗಿತ್ತು. ಅಂದಿನಿಂದ ಆರೋಪಿ ಆಗಾಗ ಬರ್ಮಾ ಮನೆಗೆ ಹೋಗುತ್ತಿದ್ದಳು. ಈ ವೇಳೆ ಪ್ರಿಯಕರನ ಸಹೋದರ ಕರಣ್ನನ್ನು ಭೇಟಿಯಾಗಿದ್ದಳು. ಒಂದು ದಿನ ತನ್ನೊಂದಿಗೆ ಕರಣ್ನನ್ನು ತನ್ನ ಮನೆಗೆ ಸಂಬಂಧಿ ಎಂದು ಕರೆದುಕೊಂಡು ಬಂದಿದ್ದಳು. ಅಂದಿನಿಂದ ಕರಣ್ ಮಹಿಳೆ ಮತ್ತು ಆಕೆಯ ಪತಿಯೊಂದಿಗೆ ಅವರ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಕರಣ್ ಸಹಾಯದಿಂದ ಪತಿಯ ಊಟದಲ್ಲಿ ವಿಷವನ್ನು ಬೆರೆಸಿ ಕೊಲೆ ಮಾಡಲು ಸಂಚು ರೂಪಿಸಿದ್ದಳು. ಅದರಂತೆಯೇ ಆಗಸ್ಟ್ 18 ರಂದು ವಿಷ ಆಹಾರ ತಿಂದು ಪ್ರಿಯಾಂಕಾ ಪತಿ ಪ್ರಜ್ಞೆಯನ್ನು ಕಳೆದುಕೊಂಡಿದ್ದಾನೆ. ಆಗ ಪ್ರಿಯಾಂಕಾ ಮತ್ತು ಕರಣ್ ಬಟ್ಟೆಯಿಂದ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ.
ವಿಚಾರಣೆಯ ನಂತರ ಪ್ರಿಯಾಂಕಾ ಮತ್ತು ಕರಣ್ನನ್ನು ಬಂಧಿಸಲಾಗಿದೆ. ಆದರೆ ವೀರು ಬರ್ಮಾ ಪರಾರಿಯಾಗಿದ್ದಾನೆ. ಪತಿಯ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಲು ಮಹಿಳೆ ಬಯಸಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿ ಮಹಿಳೆಯ ಪತಿ ದೆಹಲಿಯ ಮಾಯಾಪುರಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.