ಚಿಕ್ಕೋಡಿ: ಕೇವಲ 20 ರೂಪಾಯಿ ಆಸೆಗಾಗಿ ನಾಲ್ಕು ವರ್ಷದ ಪುಟ್ಟ ಮಗುವನ್ನು ಬಾವಿಗೆ ತಳ್ಳಿ ಕೊಲೆ ಮಾಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾಗನೂರು ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ದಿವ್ಯಾ ವಿನೋದ ಉಗಡೆ (4) ಕೊಲೆಯಾಗಿರುವ ದುರ್ದೈವಿ ಮಗು.
ದಿವ್ಯಾ ಮನೆಯಲ್ಲಿ ಕೊಟ್ಟ 20 ರೂಪಾಯಿಯನ್ನು ಕೈಯಲ್ಲಿ ಹಿಡಿದುಕೊಂಡು ಅಂಗಡಿಗೆ ಹೊರಟಿದ್ದಳು. ದಿವ್ಯಾ ಕೈಯಲ್ಲಿ 20 ರೂ. ಇರುವುದನ್ನು ನೋಡಿದ ಆರೋಪಿ ಪೂಜಾ ದತ್ತಾರಾವ್ ಕಾಂಬಳೆ (25) ಆಕೆಯ ಕೈಯಿಂದ ಹಣ ಕಸಿದುಕೊಂಡಿದ್ದಾಳೆ.
ಹಣ ಕಸಿದುಕೊಳ್ಳುತ್ತಲೆ ದಿವ್ಯಾ ರಸ್ತೆಯಲ್ಲೇ ಅಳಲು ಆರಂಭಿಸಿದ್ದಾಳೆ. ಎಲ್ಲಿ ಈ ವಿಷಯ ದೊಡ್ಡ ಸುದ್ದಿ ಆಗುತ್ತದೆ ಎಂದು ಹೆದರಿ ಕ್ರೂರಿ ಪೂಜಾ ಮಗುವನ್ನು ಹತ್ತಿರದ ಬಾವಿ ತಳ್ಳಿ ಕೊಲೆ ಮಾಡಿದ್ದಾಳೆ.
ಈ ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ಪೂಜಾಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.