ಬೆಂಗಳೂರು: ಕೊರೊನಾ ಆತಂಕದ ನಡುವೆ ಈ ಬಾರಿ ಅಧಿವೇಶನ ನಡೆದಿದೆ. ಅಧಿವೇಶನಕ್ಕೂ ಮುನ್ನ ಕೋವಿಡ್ ಪರೀಕ್ಷೆಗೆ ಒಳಗಾಗೋದನ್ನ ಕಡ್ಡಾಯ ಮಾಡಲಾಗಿತ್ತು. ಕೋವಿಡ್ ಪರೀಕ್ಷೆಗೆ ಒಳಗಾದ ಜನಪ್ರತಿನಿಧಿಗಳಲ್ಲಿ 20ಕ್ಕೂ ಅಧಿಕ ಶಾಸಕರಿಗೆ ಸೋಂಕು ತಗುಲಿರೋದು ಖಚಿತವಾಗಿದೆ. ಈ ಹಿನ್ನೆಲೆ ವಿಧಾನಸೌಧ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದ್ದು, ಅಧಿವೇಶನ ಆರಂಭಗೊಂಡಿದೆ.
ಅಧಿವೇಶನಕ್ಕೆ ಕೇವಲ ಆರವತ್ತು ಶಾಸಕರು ಹಾಜರಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಿಜೆಪಿಯ 9, ಕಾಂಗ್ರೆಸ್ನ 9 ಮತ್ತು ಜೆಡಿಎಸ್ ಮೂವರು ಶಾಸಕರ ಕೊರೊನಾ ವರದಿ ಪಾಸಿಟಿವ್ ಬಂದಿದೆ. ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಅವರಿಗೂ ಕೊರೊನಾ ಪಾಸಿಟಿವ್ ಬಂದಿದೆ.
ಕೊರೊನಾ ಸೋಂಕಿತ ಶಾಸಕರು:
1. ಬಿಜೆಪಿ: ಡಿಸಿಎಂ ಅಶ್ವಥನಾರಾಯಣ್, ಸಚಿವರಾದ ಬಸವರಾಜ್ ಬೊಮ್ಮಾಯಿ, ಗೋಪಾಲಯ್ಯ, ಬೈರತಿ ಬಸವರಾಜ್, ಶಶಿಕಲಾ ಜೊಲ್ಲೆ, ಪ್ರಭು ಚವ್ಹಾಣ್, ಶಾಸಕರಾದ ಉಮಾನಾಥ್ ಕೋಟ್ಯಾನ್, ಎಂ.ಪಿ.ಕುಮಾರಸ್ವಾಮಿ, ಎಸ್.ಆರ್. ವಿಶ್ವನಾಥ್
2. ಕಾಂಗ್ರೆಸ್: ಎನ್.ಎ.ಹ್ಯಾರಿಸ್, ಎಚ್.ಪಿ.ಮಂಜುನಾಥ್, ಬಿ.ನಾರಾಯಣ ರಾವ್, ಡಿ.ಎಸ್ ಹುಲಗೇರಿ, ಬಸನಗೌಡ ದದ್ದಲ್, ಪ್ರಿಯಾಂಕ್ ಖರ್ಗೆ, ಕುಸುಮಾ ಶಿವಳ್ಳಿ, ಬಿ.ಕೆ.ಸಂಗಮೇಶ್ ಮತ್ತು ರಘು ಆಚಾರ್
3. ಜೆಡಿಎಸ್: ವೆಂಕಟರಾವ್ ನಾಡಗೌಡ, ಡಿ.ಸಿ.ಗೌರಿಶಂಕರ್, ಕೆ.ಮಹದೇವ್
ಕೊರೊನಾ ಹಿನ್ನೆಲೆ ಅಧಿವೇಶನವನ್ನು ಮೂರು ದಿನಕ್ಕೆ ಮೊಟಕುಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಆದ್ರೆ ವಿಪಕ್ಷಗಳು ಅಧಿವೇಶನ ಮೊಟಕುಗೊಳಿಸಬಾರದು ಎಂದು ಆಗ್ರಹಿಸಿವೆ. ಸಿಎಂ ಯಡಿಯೂರಪ್ಪ ಬೆಳಗ್ಗೆ ಸದನ ಮೊಟಕುಗೊಳಿಸುವ ಬಗ್ಗೆ ನನ್ನೊಂದಿಗೆ ಮಾತನಾಡಿದ್ದರು. ಕೊರೊನಾ ಜಾಸ್ತಿ ಆಗುತ್ತಿದೆ ನಿಜ, ಆದರೆ ಅದು ನಿಮ್ಮಿಂದ ಜಾಸ್ತಿ ಆಗುತ್ತಿದೆ ಎಂದು ಹೇಳಿದೆ. ನಾವು ಅಧಿವೇಶನ ಮೊಟಕುಗೊಳಿಸಲು ಒಪ್ಪುವುದಿಲ್ಲ. ಇನ್ನೂ ಮೂರು ವಾರಗಳ ಕಾಲ ಅಧಿವೇಶನ ವಿಸ್ತರಿಸಲು ನಮ್ಮ ಪ್ರಸ್ತಾಪವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುಮಾರು 30 ರಿಂದ 40 ಬಿಲ್ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲು ತಂದಿದ್ದಾರೆ. ಸದನ ಮೊಟಕುಗೊಳಿಸುವುದಾದರೇ ಅದನ್ನೇಲ್ಲಾ ವಾಪಸ್ ಪಡೆಯಲಿ ನೋಡೋಣ. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಹೇಳುತ್ತೇನೆ ಎಂದರು.