ಧಾರವಾಡ: ಜಿಲ್ಲೆಯಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಶಿರೂರ ಗ್ರಾಮದ ದೊಡ್ಡಹಳ್ಳ ತುಂಬಿ ಹರಿದ ಕಾರಣ ಎರಡು ಟಂಟಂ ಕೊಚ್ಚಿ ಹೋಗಿ ನಾಲ್ವರು ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ.
ಸಂತೋಷ, ಆನಂದ, ಹನುಮಂತ ಮತ್ತು ಮಕ್ತುಮ್ ಎಂಬವರು ಹಳ್ಳದಲ್ಲಿ ಸಂಕಷ್ಟಕ್ಕೆ ಸಿಲುಕಿದವರು. ಹಳ್ಳದಲ್ಲಿ ಸಿಲುಕಿದ್ದ ನಾಲ್ವರಲ್ಲಿ ಇಬ್ಬರು ತಕ್ಷಣ ನೀರಿನಿಂದ ಪಾರಾದ್ರೆ, ಇನ್ನುಳಿದ ಇಬ್ಬರು ಹೈಟೆನ್ಶನ್ ಕಂಬ ಹತ್ತಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಸದ್ಯ ಇಬ್ಬರು ಬೆಳಗಾವಿಯ ಇನಾಮಹೊಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಇನ್ನಿಬ್ಬರು ಮನೆ ಸೇರಿದ್ದಾರೆ.
ಕಂಬ ಹತ್ತಿದ್ದ ಸಹೋದರರಾದ ಸಂತೋಷ ಹಾಗೂ ಆನಂದನನ್ನು ಶಿರೂರು ಗ್ರಾಮಸ್ಥರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಕಾಪಾಡಿದ್ದಾರೆ. ನಂತರ ಅವರನ್ನು ಬೆಳಗಾವಿಯ ಇನಾಮಹೊಂಗಲ ಆಸ್ಪತ್ರೆಗೆ ಸೇರಿಸಿಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ ಹನುಮಂತ ಮತ್ತು ಮಕ್ತುಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ರಭಸದಿಂದ ಹರಿಯುತ್ತಿರುವ ನೀರಿನಿಂದ ಇನಾಮಹೊಂಗಲ ಶಿರೂರ ರಸ್ತೆ ಕಡಿತಗೊಂಡಿದ್ದು, ಇದರಿಂದ ಸಂಜೆ ಪ್ರಯಾಣಿಕರು ಹಾಗೂ ಸಾರಿಗೆ ಬಸ್ಗಳು ಸೇತುವೆಯನ್ನು ದಾಟಲಾಗದೇ ಪರದಾಡಿದ್ದಾರೆ.