ಶ್ರೀನಗರ: ಜಮ್ಮು ಕಾಶ್ಮೀರದ ಶ್ರೀನಗರ ಜಿಲ್ಲೆಯ ಝಕುರಾ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ.
ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತಾಯ್ಬಾ(ಎಲ್ಇಟಿ)ದೊಂದಿಗೆ ಸಂಪರ್ಕ ಹೊಂದಿದ್ದ ಇಬ್ಬರು ಭಯೋತ್ಪಾದಕರ ಮೇಲೆ ಶ್ರೀನಗರ ಪೊಲೀಸರು ಶನಿವಾರ ಬೆಳಗ್ಗೆ ಎನ್ಕೌಂಟರ್ ನಡೆಸಿದ್ದಾರೆ. ಎನ್ಕೌಂಟರ್ನಲ್ಲಿ ಹತರಾಗಿರುವ ಉಗ್ರರಲ್ಲಿ ಒಬ್ಬನನ್ನು ಇಖ್ಲಾಕ್ ಹಾಜಂ ಎಂದು ಗುರುತಿಸಲಾಗಿದೆ ಮತ್ತು ಘಟನಾ ಸ್ಥಳದಲ್ಲಿ 2 ಪಿಸ್ತೂಲ್ಗಳು ಪತ್ತೆಯಾಗಿವೆ ಎಂದು ಕಾಶ್ಮೀರದ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈ ಸರಣಿ ಸ್ಫೋಟ ಪ್ರಕರಣದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅರೆಸ್ಟ್
ಕುಲ್ಗಾಮ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿ ನೇಮಕಗೊಂಡಿದ್ದ ಅಲಿ ಮುಹಮ್ಮದ್ ಗನಿ ಅವರನ್ನು ಜನವರಿ 29 ರಂದು ಹಾಸನ್ಪೋರಾದಲ್ಲಿ ಶಂಕಿತ ಉಗ್ರರು ಗುಂಡಿಕ್ಕಿ ಕೊಂದಿದ್ದರು. ಅವರ ಹತ್ಯೆಯಲ್ಲಿ ಹಾಜಂ ಭಾಗಿಯಾಗಿದ್ದ ಎಂದು ಕುಮಾರ್ ತಿಳಿಸಿದ್ದಾರೆ.
ಗನಿ ಅವರ ಮೇಲೆ ಗುಂಡಿನ ದಾಳಿ ನಡೆದ ಬಳಿಕ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಗನಿ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದರು. ಇದನ್ನೂ ಓದಿ: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ನಿಧನ
ಈ ವಾರದ ಆರಂಭದಲ್ಲೂ ಶೋಪಿಯಾನ್ ಜಿಲ್ಲೆಯ ಅಮಿಶಿಜಿಪೋರಾ ಪ್ರದೇಶದಲ್ಲಿ ಉಗ್ರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಗಾಯಗೊಂಡಿದ್ದ ಎಎಸ್ಐ ಶಬೀರ್ ಅಹ್ಮದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.