ಮಂಗಳೂರು: ಬೇಟೆಗೆಂದು ತೆರಳಿ ನಂತರ ನಾಪತ್ತೆಯಾಗಿದ್ದ ಇಬ್ಬರು ವ್ಯಕ್ತಿಗಳು ಶವವಾಗಿ ಮೂಡಬಿದ್ರೆಯ ಕರಿಂಜೆ ಕಾಡಿನಲ್ಲಿ ಪತ್ತೆಯಾಗಿದ್ದಾರೆ.
ಸ್ಥಳೀಯ ನಿವಾಸಿಗಳಾದ ಪ್ರವೀಣ್ ತೌರೋ(33) ಮತ್ತು ಗ್ರೇಷನ್ ಡಿಸೋಜಾ(32) ಮೃತ ದುರ್ದೈವಿಗಳು. ಇವರು ಮೂಡಬಿದ್ರೆಯಿಂದ 10 ಕಿ.ಮೀ. ದೂರದ ಕರಿಂಜೆ ಕಾಡಿಗೆ ಸೋಮವಾರ ರಾತ್ರಿ ಬೇಟೆಗೆ ತೆರಳಿದ್ದರು. ಆದರೆ ಮತ್ತೆ ಹಿಂದಿರುಗಿರಲಿಲ್ಲ.
ಇಬ್ಬರ ಮೊಬೈಲ್ ಫೋನ್ ಗಳು ಸ್ವಿಚ್ ಆಫ್ ಆಗಿದ್ದು, ಎಲ್ಲೋ ಹೋಗಿರಬಹುದು ಎಂದು ಮನೆಯವರು ಸುಮ್ಮನಿದ್ದರು. ಆದ್ರೆ ಬೇಟೆಗೆ ತೆರಳಿದ್ದ ಜೀಪ್ ಗುರುವಾರ ಕಾಡಿನಲ್ಲಿ ಪತ್ತೆಯಾಗಿತ್ತು. ಇದರಿಂದ ಗಾಬರಿಗೊಂಡ ಮನೆಯವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದರು.
ವಿಷಯ ತಿಳಿದ ಮೂಡಬಿದ್ರೆ ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ಆರಂಭಿಸಿದ್ದರು. ಆಗ ಕಾಡು ಪ್ರಾಣಿಗಳ ಬೇಟೆಗೆ ಇಟ್ಟಿದ್ದ ವಿದ್ಯುತ್ ತಂತಿ ತಗುಲಿ ಇಬ್ಬರು ಮೃತಪಟ್ಟಿರೋದು ಗೊತ್ತಾಗಿದೆ.
ಖಾಸಗಿ ಟೆಂಪೋ ಚಾಲಕರಾಗಿರುವ ಪ್ರವೀಣ್ ತೌರೋ ಅವಿವಾಹಿತರಾಗಿದ್ದರು. ಮೂಡಬಿದ್ರೆಯಲ್ಲಿ ಸರ್ವಿಸ್ ಸ್ಟೇಷನ್ ಮಾಲಕನಾಗಿರುವ ಗ್ರೇಷನ್ ವಿವಾಹಿತರಾಗಿದ್ದರು. ಈ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.