ಬೆಂಗಳೂರು: ಮಹಿಳೆಯರ ರಕ್ಷಣೆಗೆಂದೇ ಸರ್ಕಾರ ಆರಂಭಿಸಿರೋ ಪಿಂಕ್ ಹೊಯ್ಸಳ ಮಹಿಳಾ ಸಿಬ್ಬಂದಿಗೆ ನಗರದಲ್ಲಿ ಕಿರುಕುಳ ನೀಡಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಈ ಘಟನೆ ಸೋಮವಾರ ತಡರಾತ್ರಿ ಸುಮಾರು 1.15ಕ್ಕೆ ನಡೆದಿದೆ. ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ ತೋರುವ ಮೂಲಕ ನಗರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಸಭ್ಯವಾಗಿ ವರ್ತಿಸಿದವರನ್ನು ರೋಹಿತ್ ಮತ್ತು ವೈಭವ್ ಎಂದು ಗುರುತಿಸಲಾಗಿದ್ದು, ಇವರಿಬ್ಬರು ಮತ್ತಿಕೆರೆ ನಿವಾಸಿಗಳು ಎಂದು ತಿಳಿದುಬಂದಿದೆ.
ಸೋಮವಾರ ಪಬ್ ಅಲ್ಲಿ ಕಂಠಪೂರ್ತಿ ಕುಡಿದು ಹೊರ ಬಂದಿದ್ದ ಆರೋಪಿಗಳು, ಬಳಿಕ ಹೊರಗೆ ವಿನಾಯಕ ಸರ್ಕಲ್ ಬಳಿ ಇದ್ದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಹೊಯ್ಸಳ ವಾಹನದ ಒಳಗೆ ಕೈ ಹಾಕಿ ಸಿಬ್ಬಂದಿಯನ್ನು ಡಾರ್ಲಿಂಗ್ ಎಂದು ಕರೆದು ಎಳೆಯಲು ಪ್ರಯತ್ನಿಸಿದ್ದಾನೆ. ಮತ್ತೊರ್ವ ಆರೋಪಿ ಹಿಂದಿನ ಹೊಯ್ಸಳ ವಾಹನದ ಡೋರ್ ತೆಗೆದು ಅಸಭ್ಯವಾಗಿ ವರ್ತಿಸಿದ್ದಾನೆ. ನಂತರ ಕರ್ತವ್ಯದಲ್ಲಿದ್ದ ಮಂಜಣ್ಣ ಎಂಬವರಿಗೆ ಅವಾಜ್ ಹಾಕಿದ್ದಾರೆ.
ಪೊಲೀಸ್ ಆದ್ರೆ ಏನು ನಿಮ್ಮನ್ನ ಬಿಡಲ್ಲಾ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಈ ಕುರಿತು ಮಂಜಣ್ಣ ವೈಯ್ಯಾಲಿ ಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಂತೆ ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಘಟನೆ ಸಂಬಂಧ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.