ಚಾಮರಾಜನಗರ: ಎರಡು ಚಿರತೆಗಳು ಚಾಮರಾಜನಗರ ತಾಲೂಕಿನ ಅಮಚವಾಡಿ ಬಳಿ ಪ್ರತ್ಯಕ್ಷವಾಗಿದ್ದು, ಇದನ್ನು ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ.
ಅಮಚವಾಡಿಯಿಂದ ಎಣ್ಣೆ ಹೊಳೆ ಹೊಸಕೆರೆ ಮಾರ್ಗವಾಗಿ ಮಹದೇಶ್ವರ ಕಾಲೋನಿಗೆ ಹೋಗುವ ರಸ್ತೆ ಮಧ್ಯದಲ್ಲೇ ಎರಡು ಚಿರತೆಗಳು ಕಂಡುಬಂದಿದ್ದು, ಬುಧವಾರ ರಾತ್ರಿ 9 ಗಂಟೆಯ ವೇಳೆ ಚಿರತೆಗಳು ಕಾಣಿಸಿಕೊಂಡಿದೆ. ಎರಡು ಚಿರತೆಗಳು ಆಟವಾಡುತ್ತಿದ್ದ ದೃಶ್ಯವನ್ನು ವಾಹನ ಸವಾರರೊಬ್ಬರು ವಿಡಿಯೋ ಕೂಡ ಮಾಡಿದ್ದಾರೆ. ಬಳಿಕ ವಾಹನಗಳ ಸದ್ದಿಗೆ ಎರಡೂ ಚಿರತೆಗಳು ರಸ್ತೆಯಿಂದ ಓಡಿಹೋಯಿತು ಎಂದು ಸ್ಥಳೀಯರು ತಿಳಿಸಿದರು.
ಹಿಂದೊಮ್ಮೆ ಇದೇ ರಸ್ತೆಯಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು. ಆಗ ಭಯಗೊಂಡ ಸ್ಥಳಿಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆ ಅರಣು ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಬೋನು ಇಟ್ಟಿದ್ದರು. ಆದರೆ ಯಾವುದೇ ಚಿರತೆ ಸೆರೆ ಸಿಕ್ಕರಲಿಲ್ಲ.
ಎಣ್ಣೆ ಹೊಳೆ ಕೆರೆಯಲ್ಲಿ ನೀರಿರುವುದು ಹತ್ತಿರದಲ್ಲೇ ಜಾಲಿಮುಳ್ಳಿನ ಪೊದೆ, ಗುಡ್ಡ, ಕ್ವಾರಿಗಳಿರುವುದು ಚಿರತೆಗಳ ಇರುವಿಕೆಗೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಈ ಭಾಗದಲ್ಲಿ ಚಿರತೆಗಳು ಆಗಾಗ ಕಾಣಿಸಿಕೊಳ್ಳುತ್ತದೆ. ಮಹದೇಶ್ವರ ಕಾಲೋನಿ ಜನ ಈ ರಸ್ತೆಯಲ್ಲಿ ಹೆಚ್ಚು ತಿರುಗಾಡುವುದರಿಂದ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ತಿಳಿದು ಭಯಗೊಂಡಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಅವರು ಈ ಬಗ್ಗೆ ಕ್ರಮ ತೆಗೆದುಕೊಂಡು ಸ್ಥಳೀಯರ ಭಯವನ್ನು ದೂರ ಮಾಡಬೇಕಿದೆ.