ಉಡುಪಿ: ಒಳಚರಂಡಿ ಕಾಮಗಾರಿ ಸಂದರ್ಭದಲ್ಲಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ.
ಕಾಪು ತಾಲೂಕಿನ ನಗರದೊಳಗೆ ಒಳಚರಂಡಿ ಕಾಮಗಾರಿ ಸಂದರ್ಭದಲ್ಲಿ ದಾಸಪ್ಪ ಮತ್ತು ಉಮೇಶ್ ಎಂಬ ಚಿತ್ರದುರ್ಗ ಮೂಲದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಪುರಸಭೆಗೆ ಒಳಪಟ್ಟ ಒಳಚರಂಡಿ ಕಾಮಗಾರಿ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಸುಮಾರು 13 ಅಡಿ ಮಣ್ಣು ಅಗಿಯುತ್ತಿದ್ದಾಗ ರಸ್ತೆಯಲ್ಲಿ ಸಂಚರಿಸುತ್ತಿದ್ದ ಘನ ವಾಹನಗಳಿಗೆ ಭೂಮಿ ಅದುರಿ ಮಣ್ಣು ಕುಸಿದಿದೆ ಎನ್ನಲಾಗಿದೆ. ಮೇಲಿನಿಂದ ಬಿದ್ದ ಭಾರೀ ಗಾತ್ರದ ಮಣ್ಣಿಗೆ ಕಾರ್ಮಿಕರು ಮೇಲೆ ಬರಲು ಸಾಧ್ಯವಾಗಲಿಲ್ಲ.
ವಾಸುದೇವ ಶೆಟ್ಟಿ ಕಾಮಗಾರಿಯ ಗುತ್ತಿಗೆದಾರನಾಗಿದ್ದು ಯಾವುದೇ ಮುಂಜಾಗೃತಾ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಕಾರ್ಮಿಕರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾರ್ಮಿಕರನ್ನು ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.