ಮಡಿಕೇರಿ: ಮನೆಯೊಂದರ ಆವರಣದಲ್ಲಿ ಮರಿಯಾನೆಯೊಂದು (Baby Elephant) ಜನ್ಮ ಪಡೆದಂದೇ ತಾಯಿಯಿಂದ ದೂರವಾಗಿ ರೋಧನೆ ಮಾಡುತ್ತಿದ್ದ ಘಟನೆ ನಡೆದಿತ್ತು. ಸದ್ಯ ಇದೀಗ ಮರಿಯಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಪಟ್ಟು ತಾಯಿ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ (Virajpete) ಸಮೀಪದ ನರಿಯಂದಡ ಗ್ರಾಮಪಂಚಾಯಿತಿಯ ಕರಡ ಗ್ರಾಮದ ಕೀಮಲೆ ಕಾಡಿನ ಬಳಿ ಸೋಮವಾರ ತಡರಾತ್ರಿ ಕಾಡಾನೆಯೊಂದು (Elephant) ಮರಿ ಹಾಕಿ, ಜನರ ಗದ್ದಲದಿಂದ ಹೆದರಿ ಮರಿಯನ್ನು ಬಿಟ್ಟು ಕಾಡಿನೊಳಗೆ ಹೋಗಿತ್ತು. ಇದೀಗ ತಾಯಿ ಆನೆ ಜೊತೆ ಮರಿಯಾನೆಯನ್ನು ಸೇರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಕರಡ ಗ್ರಾಮದ ಕೀಮಲೆ ಕಾಡಿನ ಮನೆಯೊಂದರ ಆವರಣದಲ್ಲಿ ಕಾಡಾನೆ ಮರಿ ಹಾಕಿತ್ತು. ಮಂಗಳವಾರ ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ತಂಡೋಪತಂಡವಾಗಿ ಬಂದು ಮರಿಯನ್ನು ವೀಕ್ಷಿಸಲಾರಂಭಿಸಿದ್ದರು. ಇದರಿಂದ ವಿಚಲಿತವಾದ ಕಾಡಾನೆ ಮರಿಯನ್ನು ಬಿಟ್ಟು ತೆರಳಿತ್ತು. ಅಲ್ಲದೇ ಮರಿಯಾನೆಯನ್ನು ಬಿಟ್ಟು ಹೋದ ಹಿನ್ನೆಲೆಯಲ್ಲಿ ಅದರ ರೋಧನೆ ಮುಗಿಲು ಮುಟ್ಟಿತ್ತು. ಹೀಗಾಗಿ ಗ್ರಾಮಸ್ಥರು ಮರಿಯಾನೆಗೆ ಹಾಲು ಉಣಿಸಿ ಆರೈಕೆ ಮಾಡಿದ್ದರು. ಇದನ್ನೂ ಓದಿ: ಲಕ್ಷ್ಮೀ ಪೂಜೆಗಿಟ್ಟಿದ್ದ ವಜ್ರಾಭರಣ ಹೊತ್ತೊಯ್ದ ಕಳ್ಳರು
ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮರಿಯಾನೆಗೆ ಗ್ಲೂಕೋಸ್ ನೀಡಿ ಸ್ವಲ್ಪದೂರ ಎತ್ತಿಕೊಂಡು, ಸ್ವಲ್ಪ ದೂರ ಜೀಪ್ನಲ್ಲಿ ಕೊಂಡು ಹೊಗಿ ನಂತರ ಕಾಡಿನೊಳಗೆ ನಡೆಸಿಕೊಂಡು ಹಳ್ಳ, ಕೊಳ್ಳ ಹಾಗೂ ದಟ್ಟ ಅರಣ್ಯದ ನಡುವೆ ಸಾಗಿ ಮರಿಯಾನೆಯನ್ನು ಅಂತಿಮವಾಗಿ ತಾಯಿಯಾನೆಯೊಂದಿಗೆ ಸೇರಿಸಿದ್ದಾರೆ. ತಾಯಿ ಆನೆ ತನ್ನ ಮರಿಯನ್ನು ಬಿಟ್ಟು ಸುಮಾರು 7 ಕಿ.ಮೀ ದೂರ ಹೋಗಿರುವುದು ಅಪರೂಪ. ನಾವು ಕಾಡಿನೊಳಗೆ ಹುಡುಕಿಕೊಂಡು ಹೋಗಿ ಮರಿಯನ್ನು ತಾಯಿ ಆನೆಯೊಂದಿಗೆ ಸೇರಿಸಿದ್ದೇವೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.
ಸದ್ಯ ತಾಯಿ ಹಾಗೂ ಮರಿಯಾನೆ ಸ್ವಚ್ಛಂದವಾಗಿ ಕಾಡಿನೊಳಗೆ ಓಡಾಟ ನಡೆಸುತ್ತಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆ ಜಾತಿ ಈ ಜಾತಿ ಬಿಟ್ಟುಬಿಡಿ, ನಾವೆಲ್ಲರೂ ಬಿಜೆಪಿ ಕಾರ್ಯಕರ್ತರು, ಒಗ್ಗಟ್ಟಿನಿಂದ ಕೆಲಸ ಮಾಡೋಣ: ವಿಜಯೇಂದ್ರ