ಚಾಮರಾಜನಗರ: ಆಕಸ್ಮಿಕ ಬೆಂಕಿ ತಗುಲಿ ಎರಡು ಹಸುಗಳು ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ನಡೆದಿದೆ.
ಹೊನ್ನೂರು ಗ್ರಾಮದ ಚಿಕ್ಕಣ್ಣ ಎಂಬವರು ಬುಧವಾರ ರಾತ್ರಿ ತಮ್ಮ ಕೊಟ್ಟಿಗೆಯಲ್ಲಿ ಐದು ಹಸುಗಳನ್ನು ಕಟ್ಟಿ ಹಾಕಿದ್ದರು. ಈ ವೇಳೆ ಕೊಟ್ಟಿಗೆಗೆ ರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಹಸುಗಳು ಕೂಗಿಕೊಂಡಿವೆ. ಹಸುಗಳ ಕೂಗಾಟ ಕೇಳಿಸಿಕೊಂಡು ಚಿಕ್ಕಣ್ಣ ಮನೆಯಿಂದ ಬಂದು ನೋಡಿದ್ದು, ತಕ್ಷಣ ಕೊಟ್ಟಿಗೆಗೆ ನುಗ್ಗಿ ಮೂರು ಹಸುಗಳನ್ನು ರಕ್ಷಣೆ ಮಾಡಿದ್ದರೆ. ಆದರೆ ಎರಡು ಹಸುಗಳು ಬೆಂಕಿಯಲ್ಲಿ ಸಜೀವ ದಹನಗೊಂಡಿದ್ದವು.
ಹಸುಗಳನ್ನು ರಕ್ಷಣೆ ಮಾಡುವ ವೇಳೆ ಚಿಕ್ಕಣ್ಣಗೆ ತೀವ್ರವಾಗಿ ಗಾಯಗಳಾಗಿದ್ದು, ಅವರನ್ನು ಯಳಂದೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕೊಟ್ಟಿಗೆಗೆ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.