ನವದೆಹಲಿ: ಮೂವರು ಮಕ್ಕಳ ಪೋಷಕರು ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಲು ಅನರ್ಹ ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.
ಒಡಿಶಾ ಬುಡಕಟ್ಟು ಜನಾಂಗದ ಅಧ್ಯಕ್ಷ ತನ್ನ ಮೂರನೇ ಮಗುವನ್ನು ಬೇರೆಯವರಿಗೆ ದತ್ತು ನೀಡುವ ಮೂಲಕ ಪಂಚಾಯತ್ ನಲ್ಲಿ ಅಧಿಕಾರ ಪಡೆಯಲು ಯತ್ನಿಸಿದ್ದರು. ಈ ಕುರಿತ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಅಲ್ಲದೇ ಒಂದೊಮ್ಮೆ ಅಧಿಕಾರದಲ್ಲಿದ್ದ ವೇಳೆ ಮೂರನೇ ಮಗು ಜನಿಸಿದರೂ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್, ನ್ಯಾಯಮೂರ್ತಿ ಎಸ್ಕೆ ಕೌಲ್, ಕೆಎಂ ಜೋಸೆಫ್ ನೇತೃತ್ವದ ತ್ರಿಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ.
ಪಂಚಾಯತ್ ಕಾಯ್ದೆಯ ಪ್ರಕಾರ ಮೂರು ಮಕ್ಕಳಿದ್ದರೆ ಚುನಾವಣೆಗೆ ಸ್ಪರ್ಧೆ ಮಾಡುವ ಹಾಗಿಲ್ಲ ಅಥವಾ ಪಂಚಾಯತ್ ನಲ್ಲಿ ಯಾವುದೇ ಹುದ್ದೆ ಪಡೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಜನಿಸಿದ ಮಕ್ಕಳನ್ನು ದತ್ತು ನೀಡುವ ಮೂಲಕ ಸಂಖ್ಯೆ ನಿಯಂತ್ರಿಸಬಹುದು ಎಂದು ಹಿಂದೂ ದತ್ತು ಕಾನೂನು ಹೇಳುತ್ತದೆ. ಆದರೆ ಕಾಯ್ದೆಯ ಉದ್ದೇಶ ಜನಸಂಖ್ಯೆಯನ್ನು ಕಡಿಮೆ ಮಾಡುವುದಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.
ಒಡಿಶಾ ಗ್ರಾಮ ಪಂಚಾಯತ್ ಕಾಯ್ದೆ ಪ್ರಕಾರ ಮೂರು ಮಕ್ಕಳಿರುವ ಪೋಷಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಆದರೆ ಅವಳಿ ಹಾಗೂ ತ್ರಿವಳಿ ಮಕ್ಕಳು ಜನಿಸಿದ ವೇಳೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಕೋರ್ಟ್ ಸ್ಪಷ್ಟನೆ ನೀಡಿದೆ.
ಏನಿದು ಪ್ರಕರಣ?
ಒಡಿಶಾದ ಮೀನಾಸಿಂಗ್ ಮಝಿ ಎಂಬಾತ ತನ್ನನ್ನು ನುವಾಪಾಡಾ ಪಂಚಾಯತ್ ಅಧ್ಯಕ್ಷ ಹುದ್ದೆಯಿಂದ ಅಮಾನತು ಮಾಡಿ ಹೈ ಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅಂದಹಾಗೇ ಮೀನಾಸಿಂಗ್ ಅವರಿಗೆ 1995, 1998 ರಲ್ಲಿ ಎರಡು ಮಕ್ಕಳು ಜನಿಸಿತ್ತು. 2002ರಲ್ಲಿ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿದ್ದರು. ಅದೇ ವರ್ಷ ಅವರಿಗೆ ಮೂರನೇ ಮಗು ಜನಿಸಿತ್ತು. ಇದರಿಂದ ಅವರು ಪಂಚಾಯತ್ ಅಧ್ಯಕ್ಷ ಸ್ಥಾನದಿಂದ ಅನರ್ಹಗೊಂಡಿದ್ದರು. ಆದರೆ ಈ ವೇಳೆ ತಾವು ಮೊದಲ ಮಗುವನ್ನು ದತ್ತು ನೀಡಿದ್ದು ನನಗೆ ಇಬ್ಬರೇ ಮಕ್ಕಳಿದ್ದಾರೆ ಎಂದು ವಾದ ಮಂಡಿಸಿದ್ದರು. ಅಲ್ಲದೇ ಈ ಆಧಾರದ ಮೇಲೆಯೇ ಮತ್ತೆ ಅಧಿಕಾರ ಪಡೆಯಲು ಯತ್ನಿಸಿದ್ದರು. ಆದರೆ ಕೋರ್ಟ್ ಈ ವಾದವನ್ನು ಪುರಸ್ಕರಿಸಲಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv