ಹಾಸನ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಎನ್ನುವ ಕಾರಣಕ್ಕೆ ತಮ್ಮನನ್ನೇ ಆತನ ಅಣ್ಣ ಹಾಗೂ ಪತ್ನಿ (Wife) ಸೇರಿ ಕೊಲೆಗೈದ ಘಟನೆ ಹಾಸನದ (Hassan) ಮುಕುಂದೂರು ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅನಂದ (36) ಕೊಲೆಯಾದ ವ್ಯಕ್ತಿಯಾಗಿದ್ದು, ಆತನ ದೊಡ್ಡಪ್ಪನ ಪುತ್ರ ಸೋಮಶೇಖರ ಹಾಗೂ ಆನಂದನ ಪತ್ನಿ ಕೊಲೆಗೈದ ಆರೋಪಿಗಳಾಗಿದ್ದಾರೆ. ಆರೋಪಿಗಳು ಆನಂದನನ್ನು ಕೊಲೆ ಮಾಡಿ ತಮಗೇನು ಗೊತ್ತಿಲ್ಲದಂತೆ ನಾಟವಾಡಿದ್ದರು. ಇಬ್ಬರು ಸೇರಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಬಿಂಬಿಸಲು ಹೊರಟಿದ್ದರು. ಆದರೆ ಗ್ರಾಮಸ್ಥರು ಪೊಲೀಸರಿಗೆ ನೀಡಿದ ಮಾಹಿತಿ ಮೇರೆಗೆ, ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
10 ವರ್ಷಗಳ ಹಿಂದೆ ಆನಂದ ವಿವಾಹವಾಗಿದ್ದು, ಇಬ್ಬರು ಮಕ್ಕಳು ಹಾಗೂ ಪತ್ನಿ ಜೊತೆ ಮುಕುಂದೂರು ಹೊಸಳ್ಳಿ ಗ್ರಾಮದಲ್ಲಿ ವಾಸವಿದ್ದರು. ಆನಂದನ ಪಕ್ಕದ ಮನೆಯಲ್ಲಿಯೇ ಅಣ್ಣ ಸೋಮಶೇಖರ ಕುಟುಂಬ ನೆಲೆಸಿದ್ದು, ಕಳೆದ ಮೂರು ವರ್ಷಗಳ ಹಿಂದೆ ಆತನ ಪತ್ನಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಪತ್ನಿ ಮರಣದ ಬಳಿಕ ಸೋಮಶೇಖರ ತಮ್ಮನ ಮನೆಗೆ ಬಂದು ತಿಂಡಿ, ಊಟ ಮಾಡುತ್ತಿದ್ದ. ಈ ವೇಳೆ ನಾದಿನಿ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ. ಈ ವಿಷಯ ಆನಂದನಿಗೆ ತಿಳಿದು, ಆಪ್ತರ ಜೊತೆ ದುಃಖ ತೋಡಿಕೊಂಡಿದ್ದ. ವಿಷಯ ಹೊರಗೆ ಗೊತ್ತಾದರೆ ಮರ್ಯಾದೆ ಹೋಗುತ್ತದೆ ಎಂದು ಪತ್ನಿಗೆ ತಿಳುವಳಿಕೆ ಹೇಳಿ ಸಂಸಾರ ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದ್ದ. ಆದರೆ ಅಕ್ರಮ ಸಂಬಂಧಕ್ಕೆ ಆನಂದ ಅಡ್ಡಿಯಾಗುತ್ತಿದ್ದ ಆತನನ್ನು ಮುಗಿಸಲು ಸೋಮಶೇಖರ್ ಹಾಗೂ ಹಾಗೂ ಕೊಲೆಯಾದವನ ಪತ್ನಿ ಸಂಚು ಮಾಡಿದ್ದರು.
ಕಳೆದ ವರ್ಷ ಡಿ.26 ರಂದು ಆನಂದ ಬೈಕ್ಗೆ ಪೆಟ್ರೋಲ್ ಹಾಕಿಸಿಕೊಂಡು ಬರುತ್ತೇನೆಂದು ಹಂಗರಹಳ್ಳಿ ಗ್ರಾಮದ ಪೆಟ್ರೋಕ್ ಬಂಕ್ಗೆ ಹೋಗಿದ್ದವನು ವಾಪಾಸ್ ಮನೆಗೆ ಬಂದಿರಲಿಲ್ಲ. ಆನಂದನನ್ನು ಹುಡುಕಾಡಿದ ತಾಯಿ ಹಾಗೂ ಪತ್ನಿ, ಗೊರೂರು ಪೊಲೀಸ್ ಠಾಣೆಗೆ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದರು.
ಡಿ.28 ರಂದು ಹೊಳೆನರಸೀಪುರ ತಾಲ್ಲೂಕಿನ, ದೊಡ್ಡಕುಂಚೆವು ಗ್ರಾಮದ ಕೆರೆಯಲ್ಲಿ ಆನಂದನ ಶವ ಪತ್ತೆಯಾಗಿತ್ತು. ಪತ್ನಿ ಅಕ್ರಮ ಸಂಬಂಧದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ಆನಂದನ ಸಂಬಂಧಿಕರು ಹಾಗೂ ಗ್ರಾಮಸ್ಥರು ಭಾವಿಸಿದ್ದರು. ಆದರೆ ಆನಂದ ಮೃತದೇಹ ನೋಡಿದ ನಂತರ ಸಾವಿನ ಬಗ್ಗೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಆನಂದನ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಬಳಿಕ ಪೊಲೀಸರು (Police) ಸೋಮಶೇಖರ ಹಾಗೂ ಆನಂದನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ, ಆತನಿಗೆ ಕಂಠಪೂರ್ತಿ ಕುಡಿಸಿ, ನಾಲೆಗೆ ತಳ್ಳಿ ಮನೆಗೆ ತೆರಳಿದ್ದ ವಿಚಾರ ಬಯಲಾಗಿತ್ತು. ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.