– ರಾಷ್ಟ್ರಪತಿಯಿಂದ ಚಿನ್ನದ ಪದಕ
– 30 ವರ್ಷಗಳ ಅಪಘಾತ ರಹಿತ ಚಾಲನೆ
ಕಲ್ಲಿಕೋಟೆ: ಲ್ಯಾಂಡಿಂಗ್ ವೇಳೆ ರನ್ವೇಯಿಂದ ಜಾರಿ 2 ತುಂಡಾದ ವಿಮಾನವನ್ನು ಹಾರಿಸುತ್ತಿದ್ದ ಪೈಲಟ್ ದೀಪಕ್ ವಸಂತ ಸಾಠೆ ಯುದ್ಧ ವಿಮಾನಗಳ ಹಾರಾಟದ ಅನುಭವವನ್ನು ಪಡೆದಿದ್ದರು.
ಹೌದು. ದುಬೈಯಿಂದ 184 ಪ್ರಯಾಣಿಕರನ್ನು ಕರೆತರುತ್ತಿದ್ದ ಏರ್ಇಂಡಿಯಾ ಎಕ್ಸ್ ಪ್ರೆಸ್ ವಿಮಾನವನ್ನು ದೀಪಕ್ ವಸಂತ ಸಾಠೆ ಎರಡು ಬಾರಿ ವಿಮಾನ ನಿಲ್ದಾಣಕ್ಕೆ ಸುತ್ತು ಹೊಡೆಸಿದ್ದರು. ಆದರೆ ಪ್ರತಿಕೂಲ ಹವಾಮಾನದ ಸಮಸ್ಯೆಯ ಮಧ್ಯೆಯೂ ವಿಮಾನವನ್ನು ಟೇಬಲ್ ಟಾಪ್ ರನ್ವೇಯಲ್ಲಿ ಇಳಿಸಿದರೂ ಅದು 35 ಅಡಿ ಕಂದಕಕ್ಕೆ ಜಾರಿ ಬಿದ್ದು ಗೋಡೆಗೆ ಡಿಕ್ಕಿ ಹೊಡೆದು ಇಬ್ಭಾಗವಾಗಿದೆ.
ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದ ಸಾಠೆ ಮಿಗ್ 21 ಯುದ್ಧವಿಮಾನವನ್ನು ಹಾರಿಸಿದ್ದರು. ವಾಯುಪಡೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕೆ ಅವರಿಗೆ ರಾಷ್ಟ್ರಪತಿಯಿಂದ ಚಿನ್ನದ ಪದಕ ಸಹ ಸಿಕ್ಕಿತ್ತು. ಹೈದರಾಬಾದ್ನಲ್ಲಿರುವ ಏರ್ಫೋರ್ಸ್ ಅಕಾಡೆಮಿಯಲ್ಲಿದ್ದಾಗ ಅವರು ಸ್ವಾರ್ಡ್ ಆಫ್ ಆನರ್ ಅನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.
1981ರಲ್ಲಿ ವಾಯಪಡೆಗೆ ಸೇರಿದ್ದ ಸಾಠೆ 22 ವರ್ಷಗಳ ಕಾಲ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ಎಚ್ಎಎಲ್ನಲ್ಲಿ ಇರುವ ಏರ್ ಪೋರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಿದ್ದರು. ಸ್ಕ್ವಾಡ್ರನ್ ಲೀಡರ್ ಆಗಿ ನಿವೃತ್ತಿ ಪಡೆದ ಬಳಿಕ ನಾಗರಿಕ ವಿಮಾನ ಸೇವೆಗೆ ಸೇರ್ಪಡೆಯಾಗಿದ್ದರು.
Kerala: Wreckage of #AirIndiaExpress flight that crash-landed at Kozhikode International Airport in Karipur yesterday.
17 people, including two pilots, have lost their lives in the incident. pic.twitter.com/UUWTjAlTgZ
— ANI (@ANI) August 8, 2020
ಬೋಯಿಂಗ್ 737 ವಿಮಾನಗಳ ಹಾರಾಟದಲ್ಲಿ ಅಪಾರ ಅನುಭವ ಹೊಂದಿದ್ದ ಇವರು 30 ವರ್ಷಗಳ ಕಾಲ ಅಪಘಾತರಹಿತ ಪೈಲಟ್ ಆಗಿ ಗುರುತಿಸಿಕೊಂಡಿದ್ದರು. ಮುಂಬೈ ನಿವಾಸಿಯಾಗಿದ್ದ ಇವರು ಕಳೆದ 18 ವರ್ಷಗಳಿಂದ ಏರ್ ಇಂಡಿಯಾದಲ್ಲಿ ಪೈಲಟ್ ಆಗಿದ್ದರು. ಏರ್ ಇಂಡಿಯಾದಲ್ಲಿ ಸೇವೆಗೆ ಸೇರಿದ ನಂತರ ಅವರು ಏರ್ಬಸ್310 ಗಳ ಹಾರಾಟವನ್ನು ಯಶಸ್ವಿಯಾಗಿ ನಡೆಸಿದ್ದರು.
ಸಾಠೆ ಅವರಿಗೆ ಇಬ್ಬರು ಪುತ್ರರಿದ್ದು, ಒಬ್ಬರು ಬೆಂಗಳೂರಿನಲ್ಲಿದ್ದರೆ ಇನ್ನೊಬ್ಬರು ಅಮೆರಿಕದಲ್ಲಿದ್ದಾರೆ. ಶೀಘ್ರವೇ ಇವರು ಕಲ್ಲಿಕೋಟೆಗೆ ತಲುಪಲಿದ್ದಾರೆ ಎಂದು ವರದಿಯಾಗಿದೆ.
ಸುತ್ತಲೂ ಆಳ ಕಣಿವೆಯಿ ಇದ್ದು, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗುತ್ತದೆ. ಈ ರೀತಿಯ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸುವುದು ಬಹಳ ಸವಾಲಿನ ಕೆಲಸ. ಕಲ್ಲಿಕೋಟೆ ದುರ್ಘಟನೆಯಲ್ಲಿ 19 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.