ಬೆಂಗಳೂರು: ಕೊರೊನಾ ಕರ್ಫ್ಯೂ ಶುರುವಾಗಲು ಕೆಲವೇ ಗಂಟೆ ಬಾಕಿ ಇರುವಂತೆ ಸಾವಿರಾರು ವಾಹನಗಳು ರಸ್ತೆಗಿಳಿದ ಪರಿಣಾಮ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಹೆಮ್ಮಾರಿ ಕೊರೊನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಶನಿವಾರ ಸಂಜೆ 7ರಿಂದ ಭಾನುವಾರದವರೆಗೆ ಕರ್ಫ್ಯೂ ಮಾದರಿಯ ಲಾಕ್ಡೌನ್ ಘೋಷಿಸಲಾಗಿದೆ. ಜೊತೆಗೆ ರಂಜಾನ್ ಹಿನ್ನೆಲೆ ಸೋಮವಾರ ಸರ್ಕಾರಿ ರಜೆ ಇದೆ. ಇದರಿಂದಾಗಿ ಇಂದು ಸಂಜೆ ಸಾವಿರಾರು ಜನರು ಮನೆ ಹಾಗೂ ಊರುಗಳಿಗೆ ತೆರಳಲು ತಮ್ಮ ವಾಹನದಲ್ಲಿ ಪ್ರಯಾಣ ಆರಂಭಿಸಿದರು. ಇದರಿಂದಾಗಿ ಎಲ್ಲೆಡೆ ಟ್ರಾಫಿಕ್ ಸಮಸ್ಯೆ ಎದುರಾಯಿತು. ಇದನ್ನೂ ಓದಿ: ಫಸ್ಟ್ ಟೈಂ ರಾಜ್ಯದಲ್ಲಿ ದ್ವಿಶತಕ ಸಿಡಿಸಿದ ಕೊರೊನಾ- ಸೋಂಕಿತರ ಸಂಖ್ಯೆ 1,959ಕ್ಕೆ ಏರಿಕೆ
ಲಾಕ್ಡೌನ್ ಸಡಲಿಕೆಯಾದ ಬಳಿಕ ಸಾವಿರಾರ ಜನರು ಬೆಂಗಳೂರಿಗೆ ಬಂದಿದ್ದರು. ಆದರೆ ಈಗ ಭಾನುವಾರ ಹಾಗೂ ಸೋಮವಾರ ರಜೆ ಹಿನ್ನೆಲೆ ಮತ್ತೆ ತಮ್ಮ ತಮ್ಮ ಊರುಗಳತ್ತ ಪಯಣ ಬೆಳೆಸಿದ್ದಾರೆ. ಸಾವಿರಾರು ಜನರು ತಮ್ಮ ವಾಹನಗಳಲ್ಲಿ ಊರುಗಳಿಗೆ ಹೊರಟಿದ್ದರಿಂದ ನೆಲಮಂಗಲದ ನವಯುಗ ಟೋಲ್ ಬಳಿ ವಾಹನ ದಟ್ಟಣೆ ಉಂಟಾಯಿತು.
ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ರಾಜ್ಯದಲ್ಲಿ ಮಹಾಮಾರಿ ಕೊರೊನಾ ತಾಂಡವವಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರಿನಿಂದ ಸಾವಿರಾರು ಜನರು ಗುಂಪು ಗುಂಪಾಗಿ ತಮ್ಮ ಊರುಗಳಿಗೆ ಪಯಣ ಬೆಳೆಸಿದ್ದಾರೆ. ಇದರಿಂದಾಗಿ ಈ ಜನರು ಹಳ್ಳಿಗಳಿಗೂ ಕೋವಿಡ್-19 ವೈರಸ್ ಅನ್ನು ಹಬ್ಬಿಸುತ್ತಾರಾ ಎಂಬ ಆತಂಕ ಮೂಡಿಸಿದೆ.