ಬೆಳಗಾವಿ: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಅಬ್ಬರ ನಡುವೆ ಮಳೆರಾಯನ ಅಬ್ಬರಕ್ಕೆ ಜನರು ತತ್ತರಿಸುತ್ತಿದ್ದಾರೆ. ಎರಡು ದಿನಗಳ ನಂತರ ನಾಲೆಯಲ್ಲಿ ಕೊಚ್ಚಿಹೋಗಿದ್ದ ಯುವಕನ ಶವ ಪತ್ತೆಯಾಗಿದೆ.
ರಾಜ್ಯದಲ್ಲಿ ಕೊರೊನಾ ಅಬ್ಬರ ನಡುವೆ ದಿನದಿಂದ ದಿನಕ್ಕೆ ಮಳೆಯಬ್ಬರ ಹೆಚ್ಚುತ್ತಲೇ ಇದೆ. ಇದರ ಪರಿಣಾಮ ಕೆಲವರು ಮನೆಕಳೆದುಕೊಂಡರೆ, ಕೆಲವೆಡೆ ರಸ್ತೆಗಳೆಲ್ಲಾ ಕೆರೆಯಂತಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬೆಳಗಾವಿ ಜಿಲ್ಲೆಯ ಎಲ್ಲಾ ಹಳ್ಳ ಕೊಳ್ಳಗಳು ಸಂಪೂರ್ಣ ಭರ್ತಿಯಾಗಿವೆ. ಭಾರೀ ಮಳೆಯಿಂದಾಗಿ ಹಲವೆಡೆ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಎರಡು ದಿನಗಳ ಹಿಂದೆ ಭಾರೀ ಮಳೆಗೆ ಗೋಕಾಕ್ ತಾಲೂಕಿನ ಡುಮ್ಮಉರುಬಿನಟ್ಟಿ ಗ್ರಾಮದ ನಾಲೆಯಲ್ಲಿ ಯುವಕ ಕೊಚ್ಚಿ ಹೋಗಿದ್ದ. ಸತತ ಎರಡು ದಿನಗಳ ಕಾರ್ಯಚರಣೆ ಬಳಿಕ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ. ಗದ್ದೆಗೆ ತೆರಳಿದ್ದ 18 ವರ್ಷದ ನಾಗರಾಜ ಹುಬ್ಬಳ್ಳಿ ನೀರುಪಾಲಾಗಿದ್ದ. ನಾಲೆಯಲ್ಲಿ ಜಾಲಿ ಮರಗಳು ಹಾಗೂ ಮುಳ್ಳಿನ ಕಂಟಿಗಳು ಇದ್ದ ಹಿನ್ನೆಲೆ ಎಸ್ಡಿಆರ್ಎಫ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ನಡೆಸುತ್ತಿದ್ದ ಜಂಟಿ ಕಾರ್ಯಾಚರಣೆಗೆ ಅಡ್ಡಿಯುಂಟಾಗಿತ್ತು.
ಭಾನುವಾರದಿಂದ ಕಾರ್ಯಾಚರಣೆ ನಡೆಸಿದ್ದ ಎಸ್ಡಿಆರ್ಎಫ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಗೆ ಯುವಕನ ಸುಳಿವು ಸಿಗಲಿಲ್ಲ. ಕೊನೆಗೆ ಸ್ಥಳೀಯ ಮೀನುಗಾರರ ನೆರವು ಪಡೆಯಲಾಯಿತು. ನಂತರ ಐವರು ಮೀನುಗಾರರು ಹಾಗೂ ಮುಳುಗು ತಜ್ಞರು ಯುವಕನಿಗಾಗಿ ಶೋಧ ಕಾರ್ಯಾಚರಣೆ ನಡೆಸಿದಾಗ ನಾಗರಾಜ್ ಮೃತದೇಹ ಪತ್ತೆಯಾಗಿದೆ.