ಕೊಪ್ಪಳ: ಕೇವಲ ಎರಡು ಗಂಟೆಗಳಲ್ಲಿ ಖಾಸಗಿ ಕಂಪನಿಯಿಂದ 75,88,650 ರೂಪಾಯಿಗಳ ದಂಡ ವಸೂಲಿ ಮಾಡುವಲ್ಲಿ ಕೊಪ್ಪಳ ಜಿಲ್ಲಾಡಳಿತ ಯಶಸ್ವಿಯಾಗಿದೆ.
ಜಿಲ್ಲೆಯ ಕುಷ್ಟಗಿ ಬಳಿ ಹಾದು ಹೋಗಿದ್ದ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿಗೆ ಅಕ್ರಮವಾಗಿ ಬಳಸಿಕೊಂಡು ರಾಜಧನ ಪಾವತಿಸದೇ ಕಾಮಗಾರಿ ಪೂರ್ಣಗೊಳಿಸಿದ್ದಕ್ಕೆ ರೈತ ಸಂಘಟನೆ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ದೂರು ನಿಡಿದ್ದವು. ಈ ಹಿನ್ನಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ನವದೆಹಲಿ ಮೂಲದ ಓರಿಯಂಟಲ್ ಸ್ಟ್ರಕ್ಚರಲ್ ಎಂಜಿನಿಯರಿಂಗ್ ಪ್ರೈ.ಲೀ ಕಂಪನಿಯಿಂದ ದಂಡ ವಸೂಲಿಗೆ ಆದೇಶಿಸಿತ್ತು. ಆದರೆ ದಂಡ ವಸೂಲಿ ಕಾರ್ಯ ಇಲ್ಲಿಯವರೆಗೂ ವಿಳಂಬವಾಗಿತ್ತು.
ನಿನ್ನೆ ಜಿಲ್ಲಾಧಿಕಾರಿ ಸುರಳ್ಕರ ವಿಕಾಸ ಕಿಶೋರ್ ಅವರ ಖಡಕ್ ಆದೇಶ ಹಾಗೂ ಉಪವಿಭಾಗ ಅಧಿಕಾರಿ ನಾರಾಯಣ ರೆಡ್ಡಿ ಕನಕ ರೆಡ್ಡಿ ಅವರ ನೇತೃತ್ವದ ಅಧಿಕಾರಿಗಳ ತಂಡ ಖಾಸಗಿ ಕಂಪನಿಯ ವಣಗೇರಿ ಹಾಗೂ ಹಿಟ್ನಾಳ ಬಳಿಯ ಹೆದ್ದಾರಿ ಟೋಲ್ ಬಂದ್ ಮಾಡಿದ ಹಿನ್ನೆಲೆಯಲ್ಲಿ ಕಂಪನಿಯು ಎರಡು ಗಂಟೆಗಳಲ್ಲಿಯೇ 75,88,650 ರೂಪಾಯಿಗಳನ್ನು ಸ್ಥಳದಲ್ಲಿಯೇ ಚೆಕ್ ನೀಡುವ ಮೂಲಕ 7 ವರ್ಷದ ಹಳೆ ಪ್ರಕರಣಕ್ಕೆ ಕೇವಲ ಎರಡು ಗಂಟೆಗಳಲ್ಲಿ ಇತ್ಯರ್ಥವಾಗಿರುವುದು ವಿಶೇಷವಾಗಿದೆ.
ಅಧಿಕಾರಿಗಳ ನೇತೃತ್ವದ ತಂಡಕ್ಕೆ ಜಿಲ್ಲೆಯ ಜನರು ಶಬ್ಬಾಸ್ ಹೇಳಿದ್ದಾರೆ. ಕುಷ್ಟಗಿ ತಹಶೀಲ್ದಾರ್ ಎಂ.ಸಿದ್ಧೇಶ್, ಕೊಪ್ಪಳ ತಹಶೀಲ್ದಾರ್ ಮಜ್ಜಿಗಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ಮುತ್ತಪ್ಪ, ಗಣಿ ವಿಜ್ಞಾನಿಗಳಾದ ದೀಲಿಪ್ ಕುಮಾರ್, ರಾಮಲಿಂಗಪ್ಪ ಮತ್ತು ನವೀನ್ ಕುಮಾರ್, ಕುಷ್ಟಗಿ ಸಿಪಿಐ, ಪಿಎಸ್ಐ ಸೇರಿದಂತೆ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ತಂಡಕ್ಕೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.