– ಕಾರಿನಲ್ಲಿ ಶವ ಸುಟ್ಟು ಕಥೆ ಕಟ್ಟಿದವ ಅರೆಸ್ಟ್
ಚಂಡೀಗಢ: ಎರಡು ಕೋಟಿ ರೂ. ವಿಮೆಯ ಹಣಕ್ಕಾಗಿ ತನ್ನ ಕೊಲೆಯ ಸುಳ್ಳು ವ್ಯೂಹ ರಚಿಸಿದ್ದ ಉದ್ಯಮಿಯನ್ನ ಪೊಲೀಸರು ಬಂಧಿಸಿದ್ದಾರೆ. ಸುಳ್ಳು ಕೊಲೆಯ ಕಥೆ ಕಟ್ಟಿದ್ದ ಉದ್ಯಮಿ ಎರಡು ಕೋಟಿ ರೂಪಾಯಿ ಲಪಾಟಿಯಿಸುವ ಪ್ಲಾನ್ ಮಾಡಿ ಜೈಲುಪಾಲಾಗಿದ್ದಾನೆ.
ರಾಮ್ ಮೆಹ್ರಾ ಜೈಲು ಸೇರಿರುವ ಉದ್ಯಮಿ. ಬರ್ವಾಲ್ ದಲ್ಲಿ ಗ್ಲಾಸ್ ಡಿಸ್ಪೋಸಲ್ ವ್ಯವಹಾರ ಮಾಡಿಕೊಂಡಿದ್ದ ರಾಮ್ ನಷ್ಟದಲ್ಲಿದ್ದನು. ಮಂಗಳವಾರ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ತನ್ನ ಬಳಿಯಲ್ಲಿದ್ದ 11 ಲಕ್ಷ ನಗದು ದೋಚಿ, ಕಾರಿನಲ್ಲಿ ಶವವೊಂದನ್ನು ಇರಿಸಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಕಥೆ ಕಟ್ಟಿದ್ದ. ಮೇಲ್ನೋಟಕ್ಕೆ ತನ್ನ ಸಾವು ಆಗಿದೆ ಅನ್ನೋ ರೀತಿ ಘಟನೆಯನ್ನ ಸೃಷ್ಟಿಸಿದ್ದ ರಾಮ್ ಕಣ್ಮರೆಯಾಗಿದ್ದನು. ಛತ್ತೀಸಗಢ್ ನಲ್ಲಿದ್ದ ರಾಮ್ ಮೆಹ್ರಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಕ್ಟೋಬರ್ 7ರಂದು ಕುಟುಂಬಸ್ಥರಿಗೆ ಕರೆ ಮಾಡಿದ್ದ ರಾಮ್ ಮೆಹ್ರಾ, ನನ್ನ ಕಾರನ್ನು ಕೆಲವರು ಬೈಕಿನಲ್ಲಿ ಹಿಂಬಾಲಿಸುತ್ತಿದ್ದಾರೆ. ನನ್ನ ಬಳಿ 11 ಲಕ್ಷ ಹಣವಿದ್ದು, ಜೀವಕ್ಕೆ ಅಪಾಯವಿದೆ ಅಂತ ಹೇಳಿದ್ದನು. ಕುಟುಂಬಸ್ಥರು ಘಟನಾ ಸ್ಥಳಕ್ಕೆ ತೆರಳುವಷ್ಟರಲ್ಲಿ ಕಾರು ಬೆಂಕಿಗಾಹುತಿ ಆಗಿತ್ತು, ಒಳಗೆ ಸುಟ್ಟು ಕರಕಲಾದ ಶವ ದೊರಕಿತ್ತು. ಹಣ ದೋಚಿರುವ ದುಷ್ಕರ್ಮಿಗಳು ಕೊಲೆಗೈದು ಶವವನ್ನ ಸುಟ್ಟು ಹಾಕಿದ್ದಾರೆ ಎಂದು ತಿಳಿದಿದ್ದರು.
ಹಿಸ್ಸಾರ್ ಠಾಣೆಯ ಪೊಲೀಸರಿಗೆ ಪ್ರಕರಣದಲ್ಲಿ ಅನುಮಾನಗಳು ಕಾಡಿದ್ದವು. ಅನುಮಾನ ಬೆನ್ನತ್ತಿದ್ದಾಗ ರಾಮ್ ಮೆಹ್ರಾ ಆರ್ಥಿಕ ಸಂಕಷ್ಟದಲ್ಲಿರುವ ವಿಚಾರ ತಿಳಿದಿದೆ. 2 ಕೋಟಿ ರೂ. ವಿಮೆಯ ವಿಷಯ ಸಹ ತಿಳಿದಿದೆ. ಒಂದು ವೇಳೆ ರಾಮ್ ನಿಧನವಾದ್ರೆ ಆ ಹಣ ಆತನ ಕುಟುಂಬಸ್ಥರಿಗೆ ಸೇರಲಿದೆ ಎಂಬ ಅಂಶಗಳ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು. ಛತ್ತೀಸ್ಗಢದಲ್ಲಿದ್ದ ಆರೋಪಿಯನ್ನ ಹಿಸ್ಸಾರ್ ಗೆ ಕರೆತಂದು ವಿಚಾರಣೆಗೆ ಒಳಪಡಿಸಲಾಗಿದೆ. ಕಾರಿನಲ್ಲಿ ಶವ ಯಾರದ್ದು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.