ಶಿವಮೊಗ್ಗ: ಎರಡು ಕುಟುಂಬಗಳ ಜಮೀನು ವಿವಾದದ ದ್ವೇಷಕ್ಕೆ ಕಾಲೇಜು ವಿದ್ಯಾರ್ಥಿ ಬಲಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಅಭಿಷೇಕ್(19) ಬಲಿಯಾದ ವಿದ್ಯಾರ್ಥಿ. ಅಭಿಷೇಕ್ ಪ್ರಥಮ ಬಿಕಾಂ ಪರೀಕ್ಷೆ ಬರೆಯಲು ಹೋದಾಗ ಮತ್ತೊಂದು ಕುಟುಂಬ ಆತನಿಗೆ ಬಲವಂತವಾಗಿ ವಿಷ ಪ್ರಾಷಣ ಮಾಡಿಸಲಾಗಿದೆ ಎಂದು ದೂರಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಅಭಿಷೇಕ್ ಕಾಲೇಜು ಪರೀಕ್ಷೆ ಮುಗಿಸಿಕೊಂಡು ಬರುವಾಗ ಆರೋಪಿಗಳು ಆತನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿದ್ದರು.
ಕಾರಿನಲ್ಲಿಯೇ ವಿಷ ಕುಡಿಸಿ ತದ ನಂತರ ಶಿವಮೊಗ್ಗದ ವಿದ್ಯಾನಗರ ಬಳಿ ರೈಲ್ವೇ ಟ್ರಾಕ್ ಬಳಿ ಎಸೆದು ಹೋಗಿದ್ದರು. ಸ್ಥಳೀಯರ ಸಹಕಾರದಿಂದ ಆಸ್ಪತ್ರೆ ಸೇರಿದ್ದ ಅಭಿಷೇಕ್ ಸಾಯುವ ಮುನ್ನ ಕೃತ್ಯದ ಬಗ್ಗೆ ಪೊಲೀಸರಿಗೆ ವಿಷಯ ತಿಳಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಅಭಿಷೇಕ್ ಸಾವನ್ನಪ್ಪಿದ್ದಾರೆ.
ಆಯನೂರು ಗ್ರಾಮದ ಚನ್ನೇನಹಳ್ಳಿ ಗ್ರಾಮದಲ್ಲಿ ಪೊಲೀಸರು ಜಮಾಯಿಸಿದ್ದು, ಅಹಿತಕರ ಘಟನೆ ನಡೆಯದಂತೆ ಭದ್ರತೆ ವ್ಯವಸ್ಥೆ ಮಾಡಿದ್ದಾರೆ. ರಾಜಾ ನಾಯ್ಕ್ ಮತ್ತು ಮೆಗ್ಯಾ ನಾಯ್ಕ್ ಕುಟುಂಬಗಳ ನಡುವಿನ ಗೋಮಾಳ ಜಮೀನಿಗಾಗಿ ಆಗಾಗ ಜಗಳ, ಹೊಡೆದಾಟ ನಡೆಯುತ್ತಿತ್ತು.
ರಾಜನಾಯ್ಕ ಮಗ ಅಭಿಷೇಕ್. ಕುಟುಂಬದ ಜಗಳದಲ್ಲಿ ಈತನ ಪಾತ್ರವಿಲ್ಲದಿದ್ದರೂ ಮೆಗ್ಯಾ ನಾಯ್ಕ ಪ್ರತಿಕಾರ ತೀರಿಸಿಕೊಳ್ಳಲು ಹೊಂಚುಹಾಕಿದ್ದ ಎನ್ನಲಾಗಿದೆ. ಮೆಗ್ಯಾ ನಾಯ್ಕ್ ಸಹೋದರ ಒಬ್ಯಾ ನಾಯ್ಕ್ , ಪಾಪ ನಾಯ್ಕ್, ನಿರ್ಮಲ ಬಾಯಿ ಹಾಗೂ ಗೀತಾ ಬಾಯಿ ವಿಷ ಪ್ರಾಷಣ ಮಾಡಿಸಿದ ಆರೋಪಕ್ಕೆ ತುತ್ತಾಗಿದ್ದಾರೆ.
ಸದ್ಯ ಓಬ್ಯಾ ನಾಯ್ಕ ನನ್ನು ಕೋಟೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.