ಪುಣೆ: ವ್ಯಕ್ತಿಯೊಬ್ಬ 18 ವರ್ಷದ ಯುವಕನನ್ನು ಚಲಿಸುತ್ತಿರುವ ಬಸ್ಸಿನಲ್ಲೇ ಹರಿತವಾದ ಆಯುಧದಿಂದ ದಾಳಿ ಮಾಡಿ ಕೊಲೆಗೈದ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.
ಈ ಘಟನೆ ಖೇದ್ ತೆಹ್ ಸಿಲ್ ಜಿಲ್ಲೆಯ ದವಾಡಿ ಗ್ರಾಮದ ಸಮೀಪ ನಡೆದಿದೆ. ಮೃತ ಯುವಕ ತನ್ನ ಸಹೋದರಿಗೆ ಕಿರುಕುಳ ನೀಡುತ್ತಾನೆ ಎಂದು ಆರೋಪಿ ವಿರುದ್ಧ ದೂರು ದಾಖಲಿಸಿದ್ದನು. ಇದರಿಂದ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಆರೋಪಿ ಹೊಂಚು ಹಾಕುತ್ತಿದ್ದನು. ಹೀಗಾಗಿ ಆರೋಪಿಯಿದ್ದ ಬಸ್ಸಿಗೆ ಹತ್ತಿದ್ದ ಯುವಕನನ್ನು ಕಂಡ ಆರೋಪಿ ಸಿಟ್ಟಿನಿಂದ ಚಲಿಸುತ್ತಿದ್ದಾಗಲೇ ಹರಿತವಾದ ಆಯುಧಗಳಿಂದ ಯುವಕ ಮೇಲೆ ದಾಳಿ ಮಾಡಿದ್ದಾನೆ.
ಆರೋಪಿಯು ಮೃತ ಯುವಕನ ಸಹೋದರಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂಬ ಆರೋಪವಿದೆ. ಈ ಕುರಿತು ಯುವತಿಯ ಕುಟುಂಬ ಇತ್ತೀಚೆಗೆ ಸಂಬಂಧಿಕನೊಬ್ಬನ ಮೇಲೆ ಶಂಕಿಸಿ ಆತನ ವಿರುದ್ಧ ಕೇಸ್ ದಾಖಲಿಸಿತ್ತು. ದೂರಿನಲ್ಲಿ ಯುವತಿಯ ಫೋಟೋದೊಂದಿಗೆ ಅಶ್ಲೀಲ ಪದಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆಂದು ತಿಳಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಥಳೀಯ ಕ್ರೈಂ ಬ್ರಾಂಚ್ ಗೆ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇದೀಗ ಆರೋಪಿ ಸೇಡು ತೀರಿಸಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮಂಗಳವಾರ ಬೆಳಗ್ಗೆ ಮೃತ ಯುವಕ ದಾವಡಿ ಬಸ್ ನಿಲ್ದಾಣದಲ್ಲಿ ಬಸ್ಸು ಹತ್ತಿದ್ದಾನೆ. ಈ ಬಸ್ಸಿನಲ್ಲಿ ಶಂಕಿತನು ಕೂಡ ಇದ್ದನು. ಆದ್ರೆ ಯುವಕ ಮಾತ್ರ ಇದನ್ನು ಗಮನಿಸಿರಲಿಲ್ಲ. ಬಸ್ ಚಲಿಸಲು ಆರಂಭಿಸಿತ್ತು. ಕೂಡಲೇ ಹಿಂದಿದ್ದ ಶಂಕಿತ ಸಂಬಂಧಿಕ ನೇರವಾಗಿ ಯುವಕನ ಬಳಿ ಬಂದು ಹರಿತವಾದ ಆಯುಧದಿಂದ ದಾಳಿ ಮಾಡಿದ್ದಾನೆ.
ಘಟನೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ ಕಿರುಚಿದ್ದಾರೆ. ಕೂಡಲೇ ಚಾಲಕ ಬಸ್ ನಿಲ್ಲಿಸಿದ್ದಾರೆ. ಬಸ್ ನಿಲುಗಡೆಯಾಗುತ್ತಿದ್ದಂತೆಯೇ ಆರೋಪಿ ಇಳಿದು ಪರಾರಿಯಾಗಲು ಯತ್ನಿಸಿದ್ದಾನೆ. ಇದಾದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.