– ಡಿಸಿಜಿಐ ಎರಡು ಲಸಿಕೆಗೆಗಳಿಗೆ ಅನುಮತಿ ಕೊಟ್ಟಿರುವುದು ಸ್ವಾಗತಾರ್ಹ
– ಹಂತಹಂತವಾಗಿ ಲಸಿಕೆ ವಿತರಣೆ
– ಪಬ್ಲಿಕ್ ಟಿವಿಗೆ ಡಾ. ಮಂಜುನಾಥ್ ಪ್ರತಿಕ್ರಿಯೆ
ಬೆಂಗಳೂರು: ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ ಕೊಟ್ಟಿರುವುದು ಸ್ವಾಗತಾರ್ಹವೆಂದು ಜಯದೇವ ಆಸ್ಪತ್ರೆಯ ನಿರ್ದೇಶಕ, ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತಾನಾಡಿದ ಇವರು ಲಸಿಕೆಗಾಗಿ ತುಂಬಾ ದಿನಗಳಿಂದ ವೈದ್ಯರು ಮತ್ತು ಜನರು ಕಾಯುತ್ತಿದ್ದಾರೆ. ಲಸಿಕೆ ಬಂದ ಕೂಡಲೇ ಹಂತ ಹಂತವಾಗಿ ಕೊಡಲಾಗುವುದು. ಮೊದಲ ಹಂತದಲ್ಲಿ ಕೊರೊನಾ ವಾರಿರ್ಯಸ್ ಮತ್ತು ಆರೋಗ್ಯ ಸಿಬ್ಬಂದಿಗೆ ಕೊಡಲಾಗುವುದು ಎಂದರು.
ನಮ್ಮ ರಾಜ್ಯದಲ್ಲಿ ಲಸಿಕೆ ವಿತರಣೆಗೆ ಸಿದ್ಧತೆ ಮಾಡಲಾಗುತ್ತಿದೆ. ಡ್ರೈರನ್ ಕೂಡ ಯಶಸ್ವಿಯಾಗಿ ನಡೆದಿದೆ. ಲಸಿಕೆ ಪೂರೈಕೆಯಾಗುತ್ತಿದ್ದಂತೆ ಹಂತ ಹಂತವಾಗಿ ವಿತರಣೆಯನ್ನು ಮಾಡಲಾಗುವುದು. ಲಸಿಕೆ ವಿತರಣೆಗೆ ಈಗಿರುವ ತಾತ್ಕಾಲಿಕ ಸ್ವಾಬ್ ಸಂಗ್ರಹ ಕೇಂದ್ರಗಳನ್ನು ಮತ್ತು ಟೆಸ್ಟಿಂಗ್ ಕೇಂದ್ರಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಮುಂದೆ ಇವುಗಳನ್ನೇ ವ್ಯಾಕ್ಸಿನೇಷನ್ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತದೆ ಎಂದು ತಿಳಿಸಿದರು.
ಲಸಿಕೆ ಕೊಟ್ಟ ಮೇಲೆ ನಿಗಾ ಇಡಬೇಕಾಗಿದೆ ಹಾಗಾಗಿ ಒಂದು ಕೇಂದ್ರದಲ್ಲಿ ನೂರು ಜನರಂತೆ ವಿಂಗಡಿಸಿ ಲಸಿಕೆ ಕೊಡಲಾಗುತ್ತದೆ. ಲಸಿಕೆ ಪಡೆದ ಬಳಿಕ ಅಡ್ಡ ಪರಿಣಾಮ ಆಗುವುದಿಲ್ಲ. ಆದರೆ ಕೆಳವರಲ್ಲಿ ಸಣ್ಣಜ್ವರ, ತಲೆನೋವು ಕಾಣಿಸಿಕೊಳ್ಳುವ ಸಾಧ್ಯತೆಗಳು ಇದೆ. ಅಲರ್ಜಿ ಸಮಸ್ಯೆ ಇರುವವರಿಗೆ ಲಸಿಕೆ ಕೊಟ್ಟರೆ ಜಾಸ್ತಿ ನಿಗಾ ಇರಿಸಬೇಕಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸದ್ಯ ಲಸಿಕೆ ಕೊಡಲಾಗುತ್ತಿದೆ. ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳಿಗೆ ಲಸಿಕೆ ಈಗ ಕೊಡುವುದಿಲ್ಲ. ಯಾಕೆಂದರೆ ಮಕ್ಕಳು, ಬಾಣಂತಿಯರು ಮತ್ತು ಗರ್ಭಿಣಿಯರ ಮೇಲೆ ಲಸಿಕೆ ಪ್ರಯೋಗ ಮಾಡಿಲ್ಲ. ಹಾಗಾಗಿ ಲಸಿಕೆ ಬಂದರೂ ನೀಡುವುದಿಲ್ಲ. ಇವರ ಮೇಲೆ ಪ್ರಯೋಗ ಮಾಡಿದ ನಂತರದ ಹಂತದಲ್ಲಿ ಲಸಿಕೆ ಕೊಡಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡರು.
ಇನ್ನೂ ಒಂದೆರಡು ವಾರಗಳಲ್ಲಿ ಕೊರೊನಾ ಲಸಿಕೆ ಬರುವ ಸಾಧ್ಯತೆ ಇದೆ. ನಮ್ಮ ರಾಜ್ಯ ಲಸಿಕೆ ವಿತರಣೆಗೆ ಸನ್ನದ್ಧವಾಗಿದೆ. ನಮ್ಮ ರಾಜ್ಯದಲ್ಲಿ ಕೊರೊನಾ ರೊಪಾಂತರ ಅಧ್ಯಯನ ಮಾಡುವ ನಿರ್ಧಾರ ಆಗಿದೆ. ಎಲ್ಲರಿಗೂ ಜಿನೆಟಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ಮಾಡುವುದಿಲ್ಲ. ಪಾಸಿಟಿವ್ ಬಂದವರಿಗೆ ಜಿನೆಟಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ಮಾಡಲಾಗುತ್ತದೆ. ಹಾಗಾಗಿ ಲ್ಯಾಬ್ಗಳ ಕೊರತೆಯು ಆಗುವುದಿಲ್ಲ. ಕೊರೊನಾ ಪ್ರತಿಯೊಂದು ದೇಶದಲ್ಲೂ ರೂಪಾಂತರವಾಗಿರುವುದು ವರದಿಯಾಗಿದೆ ಎಂದು ತಿಳಿಸಿದರು.