ಕಾರವಾರ: ಭಾರತೀಯ ಜನತಾ ಪಾರ್ಟಿಗೆ ಪೂರ್ಣ ಬಹುಮತ ಸಿಕ್ಕಿದ್ದರೆ ಮುಖ್ಯಮಂತ್ರಿ ಬದಲಾವಣೆಯ ಗೊಂದಲ ಆಗುತ್ತಿರಲಿಲ್ಲ. 17 ಜನ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದ ನಂತರ ಈ ಸಣ್ಣ ಸಣ್ಣ ಗೊಂದಲವಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಗ್ರಾಮೀಣಾಭಿವೃದ್ಧ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಗೊಂದಲ ನಿರ್ಮಾಣ ಮಾಡಿಕೊಂಡವರು ಪಕ್ಷದ ನಾಯಕರಲ್ಲ. ಚುನಾವಣೆ ಫಲಿತಾಂಶದ ಗೊಂದಲ. ಕೇಂದ್ರ ನಾಯಕ ಅರುಣ್ ಸಿಂಗ್ ಬೆಂಗಳೂರಿಗೆ ಬರುತ್ತಾರೆ ಸಮಸ್ಯೆ ಆಲಿಸಿ ಪರಿಹಾರ ನೀಡುತ್ತಾರೆ. ಯಾರಿಗೆ ಏನು ಅಸಮಧಾನವಿದೆಯೋ ಕೇಂದ್ರದ ನಾಯಕರ ಮುಂದೆ ಹೇಳಿಕೊಳ್ಳುತ್ತಾರೆ ಎಂದರು.
ಮುಖ್ಯಮಂತ್ರಿಗಳ ವಿರುದ್ಧವಾಗಿ ನಾನು ರಾಜ್ಯಪಾಲರಿಗೆ ದೂರು ಕೊಡಲಿಲ್ಲ. ನಮ್ಮ ಇಲಾಖೆಗೆ ಬರಬೇಕಾದ ಹಣ ನೇರವಾಗಿ ಬರದೇ ಮುಖ್ಯಮಂತ್ರಿಗಳು ಬೇರೆಡೆ ಕೊಟ್ಟಿದ್ದು ಸರಿಯೋ ತಪ್ಪೋ ಎಂಬುದನ್ನು ಕೇಳಲು ರಾಜ್ಯಪಾಲರ ಬಳಿ ಹೋಗಿದ್ದೆ. ಮುಖ್ಯಮಂತ್ರಿ ಬದಲಾವಣೆಗೆ ಅಲ್ಲ. ನಾಯಕತ್ವ ಬದಲಾವಣೆ ವಿಚಾರದಲ್ಲಿ ಕೇಂದ್ರ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.
ದೆಹಲಿಯಲ್ಲಿ ಬಿಎಸ್ವೈ ವಿರೋಧಿ ಬಣದ ಶಾಸಕ ಅರವಿಂದ್ ಬೆಲ್ಲದ್ ಸೋಮವಾರ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ರನ್ನು ಭೇಟಿ ಮಾಡಿ ಅರ್ಧಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ಆದರೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಗಮಿಸಿದ್ದಾರೆ.
ಇದೇ ವೇಳೆ, ಅಮಿತ್ ಶಾ, ಜೆಪಿ ನಡ್ಡಾ ಭೇಟಿಗೂ ಬೆಲ್ಲದ್ ಪ್ರಯತ್ನ ನಡೆಸಿದ್ದಾರೆ. ಈ ಬೆನ್ನಲ್ಲೇ ಬುಧವಾರ ಸಂಜೆ ಬೆಂಗಳೂರಿನಲ್ಲಿ ನಡೆಯಲಿರುವ ಸಚಿವರ ಸಭೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಬೇಕಾ? ಬೇಡ್ವಾ ಎಂದು ಸಂಧಿಗ್ಧತೆಯಲ್ಲಿ ಅರುಣ್ ಸಿಂಗ್ ಸಿಲುಕಿದ್ದಾರೆ ಎನ್ನಲಾಗಿದೆ. ಅರುಣ್ ಸಿಂಗ್ ಜೊತೆಗೆ ವೀಕ್ಷಕರೊಬ್ಬರನ್ನು ಕಳಿಸಿ ಎಂದು ಬಿಎಸ್ವೈ ವಿರೋಧಿ ಬಣ ಹೈಕಮಾಂಡ್ಗೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆ ಮುಖ್ಯಮಂತ್ರಿ ಬಣದ ಚಿಂತೆಗೆ ಕಾರಣವಾಗಿದೆ. ಇದನ್ನೂ ಓದಿ: ವಿಪಕ್ಷ ನಾಯಕನಾದ ನನ್ನ ಆರೋಪಗಳಿಗೆ ಈಶ್ವರಪ್ಪ ಸಾಕ್ಷ್ಯ ಕೊಟ್ರು: ಸಿದ್ದರಾಮಯ್ಯ
ಈ ಮಧ್ಯೆ ಅರವಿಂದ್ ಬೆಲ್ಲದ್ ವಿರುದ್ಧ ಎಂಎಲ್ಸಿ ಆಯನೂರು ಮಂಜುನಾಥ್ ಕಿಡಿಕಾರಿದ್ದಾರೆ. ಅರವಿಂದ್ ಬೆಲ್ಲದ್ ಎಂಬ ಮನುಷ್ಯ ಮುಖ್ಯಮಂತ್ರಿ ಕನಸು ಕಾಣುತ್ತಿದ್ದಾರೆ. ತಾವೇ ಗೆದ್ದು ಬರಲು ತಿಣುಕಾಡುವ ಮನುಷ್ಯ ಆತ. ಅವರು ಸಿಎಂ ಕನಸು ಕಾಣಲಿ ಯಾರು ಬೇಡ ಅಂತಾರೆ ಎಂದು ಆಯನೂರು ಮಂಜುನಾಥ್ ವ್ಯಂಗ್ಯ ಮಾಡಿದ್ದಾರೆ. ಇನ್ನು ವಿಜಯಪರದ ಶಾಸಕ ಯತ್ನಾಳ್ ಶಾಸಕರಿಗೆ ಕರೆ ಮಾಡಿ ನಾನೇ ಮುಂದಿನ ಸಿಎಂ, ಸಹಕಾರ ಕೊಡಿ ಎಂದು ಕೇಳ್ತಿದ್ದಾರೆ ಅಂತಾ ರೇಣುಕಾಚಾರ್ಯ ಆರೋಪಿಸಿದ್ದಾರೆ. ಇದನ್ನೂ ಓದಿ: ನಾಯಕತ್ವ ಬದಲಾವಣೆಗೆ ದೆಹಲಿಯಲ್ಲಿ ಬೆಲ್ಲದ್ ರಣತಂತ್ರ- ಅರುಣ್ ಸಿಂಗ್ ಮುಂದೆ ಬೆಲ್ಲದ್ ಹೇಳಿದ್ದೇನು?