ಬೆಂಗಳೂರು: ಮಕ್ಕಳಲ್ಲಿ ಹೆಚ್ಚು ಕ್ಯಾನ್ಸರ್ (Cancer) ಪತ್ತೆ ಆಗುತ್ತಿರುವುದು ಬೆಳಕಿಗೆ ಬಂದಿದೆ. ಖುದ್ದು ರಾಜ್ಯ ಸರ್ಕಾರವೇ ಈ ಬಗ್ಗೆ ಅಂಕಿ ಅಂಶಗಳನ್ನು ಕೊಟ್ಟಿದೆ. ಈ ಬಗ್ಗೆ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ (Congress) ಸದಸ್ಯೆ ಉಮಾಶ್ರೀಯವರ ಪ್ರಶ್ನೆಗೆ ಸಚಿವ ಶರಣು ಪ್ರಕಾಶ್ ಪಾಟೀಲ್ (Sharanu Prakash Patil) ಉತ್ತರ ನೀಡಿದ್ದಾರೆ.
ಪ್ರತಿ ವರ್ಷ ರಾಜ್ಯದಲ್ಲಿ 0-14 ವಯಸ್ಸಿನ ಮಕ್ಕಳಲ್ಲಿ 1533 ಪ್ರಕರಣಗಳು ಕಂಡುಬರುತ್ತಿವೆ. ಗಂಡುಮಕ್ಕಳಲ್ಲಿ 876 ಕೇಸ್ ಮತ್ತು ಹೆಣ್ಣುಮಕ್ಕಳಲ್ಲಿ 657 ಕೇಸ್ ದಾಖಲಾಗುತ್ತಿದೆ. ಗಂಡು ಮಕ್ಕಳಲ್ಲಿ ಸಾಮಾನ್ಯವಾಗಿ 45% ರಕ್ತ ಕ್ಯಾನ್ಸರ್ ಹಾಗೂ 14.5% ಲಿಂಪೋಮಾ ಕ್ಯಾನ್ಸರ್, 12.9 % ಮೆದುಳು, 5.6% ಮೂಳೆ ಸಂಬಂಧಿಸಿದ ಕ್ಯಾನ್ಸರ್, 3.6% ಮೂತ್ರಪಿಂಡ ಕ್ಯಾನ್ಸರ್, 2.6% ಕಣ್ಣಿನ ಕ್ಯಾನ್ಸರ್ ಬರುತ್ತಿದೆ.
ಹೆಣ್ಣುಮಕ್ಕಳಲ್ಲಿ 44.6% ರಕ್ತ ಕ್ಯಾನ್ಸರ್, 12.1% ಮೆದುಳು- ನರ ಕ್ಯಾನ್ಸರ್, 9.5% ದುಗ್ದ ಗ್ರಂಥಿ ಅಥವಾ ಲಿಂಪೋಮಾ ಕ್ಯಾನ್ಸರ್, 5.8% ಮೂಳೆ ಕ್ಯಾನ್ಸರ್ ಹಾಗೂ 3.4% ಮೃದು ಅಂಗಾಂಗ ಕ್ಯಾನ್ಸರ್ ಪತ್ತೆಯಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಿದ್ವಾಯಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿದ್ದೇವೆ. ಎಲ್ಲಾ ರೀತಿ ಕ್ಯಾನ್ಸರ್ ಚಿಕಿತ್ಸೆ ಕೊಡುತ್ತಿದ್ದೇವೆ. ಬೋನ್ ಮ್ಯಾರೋ ಚಿಕಿತ್ಸೆ ಕೂಡಾ ಕಿದ್ವಾಯಿ ಆಸ್ಪತ್ರೆಯಲ್ಲಿ ಈಗ ಕೊಡುತ್ತಿದ್ದೇವೆ. ABRKಯಲ್ಲಿ ಚಿಕಿತ್ಸೆಗೆ ಹಣ ಕೊಡಲು ತೀರ್ಮಾನ ಮಾಡಲಾಗಿದೆ. ಕ್ಯಾನ್ಸರ್ ಜಾಗೃತಿ ಮೂಡಿಸೋ ಕೆಲಸ ಮಾಡ್ತಿದ್ದಾರೆ. 4 ಭಾಗದಲ್ಲಿ ಮಕ್ಕಳ ಕ್ಯಾನ್ಸರ್ಗೆ ಚಿಕಿತ್ಸೆಗೆ ಆಸ್ಪತ್ರೆ ನಿರ್ಧಾರ ಮಾಡಲಾಗಿದೆ. ಇನ್ನೂ ಮೈಸೂರು, ಕಲಬುರ್ಗಿ, ಹುಬ್ಬಳ್ಳಿಯಲ್ಲಿ ಆಸ್ಪತ್ರೆಯಲ್ಲಿ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ಕ್ಯಾನ್ಸರ್ ಬಗ್ಗೆ ಜಿಲ್ಲಾ, ತಾಲೂಕು ಮಟ್ಟದ ಜಾಗೃತಿ ಮೂಡಿಸಲು ಕ್ರಮವಹಿಸುತ್ತೇವೆ ಎಂದು ತಿಳಿಸಿದ್ದಾರೆ.