ಕೊಪ್ಪಳ: ಕಾಮಗಾರಿಗೆ ಅಗೆದಿದ್ದ ಗುಂಡಿಯನ್ನು ಒಂದು ವರ್ಷವಾದರೂ ಮುಚ್ಚದೇ ಬಾಲಕಿಯೊಬ್ಬಳು ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಇಲ್ಲಿನ ಹೊಸಪೇಟೆ ರಸ್ತೆಯಲ್ಲಿರುವ ಕೆಎಸ್ ಆಸ್ಪತ್ರೆಯ ಬಳಿ ನಡೆದಿದೆ.
15 ವರ್ಷದ ಭೂಮಿಕಾ ಪ್ರಾಣ ಕಳೆದುಕೊಂಡ ಬಾಲಕಿ. ಕಾಮಗಾರಿಗಾಗಿ ಅಗೆದಿದ್ದ ಗುಂಡಿಯನ್ನು ಒಂದು ವರ್ಷವಾದರೂ ಮುಚ್ಚದೇ, ಈಚೆಗಷ್ಟೇ ಸುರಿದ ಭಾರೀ ಮಳೆಯಿಂದ ನೀರು ತುಂಬಿಕೊಂಡಿತ್ತು. ಇದೇ ಗುಂಡಿಗೆ ಆಯತಪ್ಪಿ ಬಿದ್ದ ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ. ಇದನ್ನೂ ಓದಿ: ಗೃಹ ಸಚಿವರ ತವರಲ್ಲೇ ಹೇಯಕೃತ್ಯ – ಹೆಂಡತಿಯ ಅಪ್ರಾಪ್ತ ತಂಗಿ ಮೇಲೆ ಅತ್ಯಾಚಾರ
ಬಾಲಕಿಯ ತಂದೆ ಶಂಭುಲಿಂಗಯ್ಯ ಪಾನ್ಶಾಪ್ ನಡೆಸುತ್ತಿದ್ದರು. ಇದ್ದ ಒಬ್ಬಳೇ ಮಗಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ನಿನ್ನೆ ಪಾನ್ಶಾಪ್ಗೆ ಬಂದು ವಾಪಸ್ ಮನೆಗೆ ಹೋಗುತ್ತಿದ್ದ ಬಾಲಕಿ ಆಯತಪ್ಪಿ ಗುಂಡಿಯೊಳಗೆ ಬಿದ್ದಿದ್ದಾಳೆ. ಸಂಜೆಯಾದರೂ ಮಗಳು ಮನೆಗೆ ಬರಲಿಲ್ಲವೆಂದು ಕುಟುಂಬದವರು ಇಡೀ ಊರೆಲ್ಲಾ ಹುಡುಕಾಡಿದ್ದಾರೆ. ಆದರೂ ಮಗಳು ಸಿಕ್ಕಿರಲಿಲ್ಲ.
ನಂತರ ಕೊಪ್ಪಳದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಕೈಗೊಂಡಿದ್ದ ಪೊಲೀಸರು ಸಿಸಿಟಿವಿ ಕ್ಯಾಮೆರಾದಲ್ಲಿ ಪರಿಶೀಲಿಸಿದಾಗ ಬಾಲಕಿ ಗುಂಡಿಗೆ ಬಿದ್ದಿರುವುದು ಗೊತ್ತಾಗಿ, ಇಂದು ಶವ ಪತ್ತೆಹಚ್ಚಿದ್ದಾರೆ. ತಂದೆ-ತಾಯಿ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಶವ ಸಾಗಿಸ್ತಿದ್ದಾಗ ಡಿಸಿ ಕಚೇರಿ ಮುಂದೆಯೇ ಬೈಕ್ ಸ್ಕಿಡ್- ಮಹಿಳೆಯ ಕೊಲೆ ರಹಸ್ಯ ಬಯಲು
ಕಾಮಗಾರಿಗೆಂದು ಒಂದು ವರ್ಷದ ಹಿಂದೆ ಅಗೆದ 8 ಆಳದ ಗುಂಡಿಯನ್ನು ಈವರೆಗೂ ಮುಚ್ಚಿರುವುದಿಲ್ಲ. ಇದರಿಂದ ಆಯತಪ್ಪಿಬಿದ್ದ ನಮ್ಮ ಮಗು ಪ್ರಾಣ ಕಳೆದುಕೊಮಡಿದೆ. ಆಸ್ಪತ್ರೆಯವರು ರಾತ್ರಿ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದರೂ ಬಾಲಕಿಯನ್ನು ರಕ್ಷಿಸಬಹುದಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.