ನವದೆಹಲಿ: 147 ತಾಲೂಕುಗಳಲ್ಲಿ ಕಳೆದ 7 ದಿನಗಳಿಂದ ಯಾವುದೇ ಹೊಸ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ ಎಂಬ ಸಂತಸದ ಸುದ್ದಿಯನ್ನು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.
ಉನ್ನತ ಮಟ್ಟದ ಮಂತ್ರಿಗಳ ಜೊತೆಗಿನ 23ನೇ ಸಭೆಯಲ್ಲಿ ಭಾಗಿಯಾಗಿ ಮಾತಾನಾಡಿದ ಸಚಿವರು, ದೇಶದಲ್ಲಿರುವ 147 ತಾಲೂಕುಗಳಲ್ಲಿ ಕಳೆದ 7 ದಿನಗಳಿಂದ ಯಾವುದೇ ಹೊಸ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಹಾಗೆ 18 ತಾಲೂಕುಗಳಲ್ಲಿ 14 ದಿನಗಳಿಂದ, 6 ತಾಲೂಕುಗಳಲ್ಲಿ 21 ದಿನಗಳಿಂದ ಮತ್ತು 21 ಜಿಲ್ಲೆಗಳಲ್ಲಿ ಕಳೆದ 28 ದಿನಗಳಿಂದ ಯಾವುದೇ ಹೊಸ ಕೊರೊನಾ ಪ್ರಕರಣ ದಾಖಲಾಗದೆ ಇರುವುದು ಒಳ್ಳೆಯ ಬೆಳವಣಿಗೆ ಎಂದರು.
ಇನ್ನೂ ಕೊರೊನಾ ಸಂದರ್ಭದಲ್ಲಿ ದೇಶದ ಜನರು ಎಲ್ಲಾ ರೀತಿಯಿಂದ ಈ ರೋಗದ ವಿರುದ್ಧ ಹೋರಾಡಿ ಮುಕ್ತಿ ಹೊಂದುತ್ತಿದ್ದು, ಕೊರೊನಾ ಸೋಂಕಿಗೆ ಒಳಗಾದವರಲ್ಲಿ ಮರಣ ಪ್ರಮಾಣ ಶೇ.1.44 ರಷ್ಟಿದೆ. 1 ಕೋಟಿ 3 ಲಕ್ಷದ 73 ಸಾವಿರದ 606ಜನ ಕೊರೊನಾ ಗುಣಮುಖರಾಗಿದ್ದಾರೆ. ನಮ್ಮ ದೇಶದಲ್ಲಿ ಗುಣಮುಖರಾದವರ ಸಂಖ್ಯೆ ಶೇ.97 ರಷ್ಟಿದೆ.
ದೇಶದಲ್ಲಿ ಈಗಾಗಲೇ 15,473 ಕೊರೊನಾ ಆಸ್ಪತ್ರೆಯನ್ನು ತೆರೆದು ಆರೋಗ್ಯ ಸೇವೆಯನ್ನು ನೀಡಿದ್ದೇವೆ. ಇದರೊಂದಿಗೆ ಕೊರೊನಾ ಆರೈಕೆ ಕೇಂದ್ರ ಮತ್ತು 19 ಲಕ್ಷದ 714 ಬೆಡ್ ಹಾಗೂ 12 ಸಾವಿರದ 673 ಕ್ವಾರಂಟೈನ್ ಸೆಂಟರ್ ಗಳನ್ನು ಸ್ಥಾಪಿಸಿದ್ದೇವೆ ಎಂದು ವರದಿ ನೀಡಿದರು.
ಕೊರೊನಾ ಲಸಿಕೆಯನ್ನು ಈಗಾಗಲೇ 42,674 ಕೇಂದ್ರಗಳಲ್ಲಿ ದೇಶದಾದ್ಯಂತ ನೀಡಲಾಗಿದ್ದು, 23 ಲಕ್ಷದ 55 ಸಾವಿರ್ 979 ಜನರಿಗೆ ಕೊರೊನಾ ಲಸಿಕೆಯನ್ನು ಕೊಡಲಾಗಿದೆ. 3 ಲಕ್ಷದ 26 ಸಾವಿರದ 499 ಜನ ಕೊರೊನಾ ವಾರಿಯರ್ಸ್ ಗಳಿಗೂ ಲಸಿಕೆ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.