ಕಾರವಾರ: ಅಡಿಕೆ ತೋಟದಲ್ಲಿ ಗೊನೆ ಕೊಯ್ಯುವುದು ಎಂದರೇ ಅದು ಸಾಹಸದ ಕೆಲಸ. ನೂರಾರು ಅಡಿ ಎತ್ತರಕ್ಕೆ ಮರ ಹತ್ತಿ ಗೊನೆ ಇಳಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗಿರುವಾಗ ಕಾರವಾರದಲ್ಲಿ 13 ವರ್ಷದ ಬಾಲಕನೋರ್ವ ಅಡಿಕೆ ಮರ ಏರಿ ಗೊನೆ ಕೊಯ್ಯುದರಲ್ಲಿ ಎಕ್ಸ್ಪರ್ಟ್ ಎನಿಸಿಕೊಂಡಿದ್ದಾನೆ.
ಯಲ್ಲಾಪುರ ತಾಲೂಕಿನ ಉಮ್ಮಚಗಿಯ ನಿವಾಸಿ ಸಚೇತ ದಿವಸ್ಪತಿ ಹೆಗಡೆ, 30 ಅಡಿಗೂ ಹೆಚ್ಚಿನ ಎತ್ತರದ ಮರ ಏರಿ ಅಡಕೆ ಕೊಯ್ಯುತ್ತಾ ಒಂದು ಮರದಿಂದ ಮತ್ತೊಂದು ಮರ ಏರುವುದರಲ್ಲಿ ಸೈ ಎನಿಸಿಕೊಂಡ ಬಾಲಕ. ಸಚೇತ ದಿವಸ್ಪತಿ ಹೆಗಡೆ, ಕೊರೊನಾ, ಲಾಕ್ಡೌನ್ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಮಲೆನಾಡಿನಲ್ಲಿ ಅಡಿಕೆ ಸುಗ್ಗಿ ಬಂದರೂ ಗೊನೆ ಕೊಯ್ಯುವವರಿಲ್ಲದೆ ಅಡಿಕೆ ಬೆಳೆಗಾರರು ನಷ್ಟ ಅನುಭವಿಸುತ್ತಿರುವುದನ್ನು ನೋಡಿದ್ದಾನೆ. ಅಲ್ಲದೆ ತಮ್ಮ ತೋಟದಲ್ಲಿ ಲಕ್ಷಾಂತರ ರೂಪಾಯಿ ಅಡಿಕೆ ನಷ್ಟವಾಗುದನ್ನು ಗಮನಿಸಿ ತಾನೇ ಮರವೇರಳು ನಿರ್ಧರಿಸಿ ಇದೀಗ ಇದನ್ನು ರೂಢಿಸಿಕೊಂಡಿದ್ದಾನೆ. ಇದನ್ನೂ ಓದಿ: ಆಸ್ಪತ್ರೆ, ಕ್ಲಿನಿಕ್ಗಳಲ್ಲೂ ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಭ್ಯ
ಮರವೇರಿ ಅಡಿಕೆ ಕೊಯ್ಯಲು ಸಚೇತ ದಿವಸ್ಪತಿ ಹೆಗಡೆ ವಿಶೇಷ ತರಬೇತಿ ಏನು ಪಡೆದಿಲ್ಲ. ಈ ಹಿಂದೆ ಗೊನೆ ಕೊಯ್ಯುವವರನ್ನು ನೋಡಿ, ಆತ ಉಪಯೋಗಿಸುವ ವಸ್ತುಗಳನ್ನು ತಾನೂ ಸಿದ್ಧಪಡಿಸಿಕೊಂಡು 20 ರಿಂದ 50 ಅಡಿ ಎತ್ತರದ ಮರ ಏರಿ ಕ್ವಿಂಟಾಲ್ಗಟ್ಟಲೇ ಅಡಿಕೆ ಕೊಯ್ಯುವ ಮೂಲಕ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾನೆ.
ಕಾರವಾರ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕೆಲಭಾಗಗಳಲ್ಲಿ ಅಡಿಕೆ ಮರ ಏರಿ ಅಡಿಕೆ ಕೊಯ್ಯಲು ಒಬ್ಬ ವ್ಯಕ್ತಿ 2 ಸಾವಿರ ರೂ. ನಿಂದ 3 ಸಾವಿರ ರೂ. ವರೆಗೂ ದಿನಕ್ಕೆ ಕೂಲಿ ತೆಗೆದುಕೊಳ್ಳುತ್ತಾನೆ. ದುಬಾರಿ ಕೂಲಿ ಕೊಟ್ಟರೂ ಗೊನೆ ಕೊಯ್ಯಲು ಕೆಲಸದವರು ಸಿಗುವುದಿಲ್ಲ. ಹೀಗಾಗಿ ಸಚೇತ ದಿವಸ್ಪತಿ ಹೆಗಡೆ, ತಮ್ಮ ಸ್ವಂತ ತೋಟದ ಅಡಿಕೆಯನ್ನು ಕೊಯ್ಯುತ್ತಿದ್ದಾನೆ. ಈ ಕಾರ್ಯಕ್ಕೆ ಕುಟುಂಬದವರು ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ನಿಯಮ ಮರೆತು ಕ್ರಿಕೆಟ್ ಪಂದ್ಯಾಟ – ಬ್ಯಾಟ್ಬೀಸಿ ಸಂಭ್ರಮಿಸಿದ ಜಮೀರ್
ಇಂದಿನ ತಲೆಮಾರಿನ ಜನ ಕೃಷಿಯಿಂದ ವಿಮುಖವಾಗುತ್ತಿರುವಾಗ ಈ ಪುಟ್ಟ ಬಾಲಕ ಕೃಷಿಯ ಬಗ್ಗೆ ಆಸಕ್ತಿ ತೋರಿಸಿ ಮುನ್ನುಗುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕೈ ಕೆಸರಾದರೇ ಬಾಯಿ ಮೊಸರು ಎನ್ನುವಂತೆ ಕಷ್ಟ ಪಟ್ಟರೇ ಎಂತದ್ದನ್ನೂ ಸಾಧಿಸಬಹುದು ಎನ್ನುವುದಕ್ಕೆ ಸಚೇತ ದಿವಸ್ಪತಿ ಹೆಗಡೆ ಮಾದರಿಯಾಗಿದ್ದಾನೆ.