ಮುಂಬೈ: ವಿದ್ಯಾರ್ಥಿನಿಯೊಬ್ಬಳು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಬದಲಿ ಗ್ರಾಮದಲ್ಲಿ ನಡೆದಿದೆ.
ಯಾಮಿನಿ ಪ್ರಮೋದ್ ಪಾಟೀಲ್ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. 12ನೇ ತರಗತಿಯಲ್ಲಿ ಓದುತ್ತಿದ್ದ ಯಾಮಿನಿ ಮುಂದೆ ದೊಡ್ಡ ಅಧಿಕಾರಿಯಾಗುವ ಕನಸು ಕಂಡಿದ್ದಳು. ತಂದೆ ರೈತನಾಗಿದ್ದು, ಈ ಬಾರಿ ಮಳೆಯಾಗದ ಹಿನ್ನೆಲೆಯಲ್ಲಿ ಕುಟುಂಬದ ಆರ್ಥಿಕ ಸ್ಥಿತಿ ಸರಿಯಾಗಿರಲಿಲ್ಲ. ಯಾಮಿನಿ ಉನ್ನತ ಶಿಕ್ಷಣದ ಕನಸಿಗೆ ಬಡತನ ಅಡ್ಡಿಯಾಗಿತ್ತು.
ತಂದೆ ಒಂದು ಎಕರೆ ಜಮೀನಿನಲ್ಲಿ ಸಂಸಾರವನ್ನು ನಡೆಸುತ್ತಿದ್ದರು. ಈ ಜಮೀನಿನಿಂದ ಬಂದ ಆದಾಯದಲ್ಲಿ ಕುಟುಂಬದ ನಿರ್ವಹಣೆ ನಡೆಯುತ್ತಿತ್ತು. 12ನೇ ತರಗತಿ ಪೂರ್ಣಗೊಂಡ ಬಳಿಕ ಶಿಕ್ಷಣ ನಿಲ್ಲಿಸುವಂತೆ ಯಾಮಿನಿಗೆ ಪೋಷಕರು ತಿಳಿಸಿದ್ದರು. ಇದರಿಂದ ಯಾಮಿನಿ ಮಾನಸಿಕವಾಗಿ ಕುಗ್ಗಿದ್ದಳು.
ಶನಿವಾರ ಪೋಷಕರು ಮದುವೆ ನಿಮಿತ್ತ ಪಕ್ಕದೂರಿಗೆ ತೆರಳಿದ್ದರು. ತಮ್ಮ ಶಾಲೆಗೆ ಹೋಗಿದ್ದನು. ಮನೆಯಲ್ಲಿ ಒಬ್ಬಳೇ ಇದ್ದ ಯಾಮಿನಿ ಬೆಳೆಗೆ ಸಿಂಪಡಿಸಲು ತಂದಿದ್ದ ಕೀಟನಾಶಕ ಸೇವಿಸಿದ್ದಾಳೆ. ಮಧ್ಯಾಹ್ನ ಪೋಷಕರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಯಾಮಿನಿಯನ್ನ ಆಸ್ಪತ್ರೆಗೆ ದಾಖಲಿಸಿದಾಗ, ವೈದ್ಯರು ಮಾರ್ಗ ಮಧ್ಯೆಯೇ ಸಾವನ್ನಪ್ಪಿರೋದನ್ನ ಖಚಿತಪಡಿಸಿದ್ದಾರೆ.