ಚಿಕ್ಕಬಳ್ಳಾಪುರ: ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಜಿಲ್ಲೆಯ 12 ಮಂದಿ ಕೆಎಎಸ್ ಅಧಿಕಾರಿಗಳಾಗಿ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕೆಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ವಿವಿಧ ಜಿಲ್ಲಾ ಮಟ್ಟದ ಹುದ್ದೆಗಳಿಗೆ ಜಿಲ್ಲೆಯ 12 ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಬಾಗೇಪಲ್ಲಿ ತಾಲೂಕು ಪಾತಪಾಳ್ಯ ಹೋಬಳಿ ಸೋಮನಾಥಪುರದ ರಾಚವಾರಪಲ್ಲಿಯ ಎಂ.ಕೆ.ಶೃತಿ ಅವರು ಒಟ್ಟು 1,185 ಅಂಕ ಪಡೆದಿದ್ದು, 10 ನೇ ರ್ಯಾಂಕ್ ಪಡೆದು ಉಪವಿಭಾಗಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಚಿಂತಾಮಣಿ ತಾಲೂಕು ಬುರುಡಗುಂಟೆ ಅಂಚೆ ಉಲಿಬೆಲೆ ಗ್ರಾಮದ ಕೃಪಾಲಿನಿ ಅವರು 1,176 ಅಂಕಗಳನ್ನು ಗಳಿಸಿ ಉಪವಿಭಾಗಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ಬಾಗೇಪಲ್ಲಿ ತಾಲೂಕು ಚಂಚರಾಯನಪಲ್ಲಿ ಅಂಚೆ ಬ್ರಾಹ್ಮಣರಹಳ್ಳಿಯ ಬಿ.ಆರತಿ ಕೋಂ ಶಂಕರ ಎಂಬುವವರು 1,096 ಅಂಕಗಳನ್ನು ಪಡೆದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಗೌರಿಬಿದನೂರು ಪಟ್ಟಣದ ವಿಜಯನಗರದ ಶ್ವೇತಭವನ ನಿವಾಸಿ ಜಿ.ಎಸ್.ಸ್ಮೀತಾ ಅವರು 1,138 ಅಂಕ ಪಡೆದು ಕಮರ್ಷಿಯಲ್ ಟ್ಯಾಕ್ಸ್ ನ ಅಸಿಸ್ಟೆಂಟ್ ಕಮೀಷಿನರಾಗಿ ಆಯ್ಕೆಯಾಗಿದ್ದು, ಅದೇ ರೀತಿ ಗೌರಿಬಿದನೂರು ತಾಲೂಕು ಪುರ ಗ್ರಾಮದ ಪಿ.ಎಸ್.ರಾಜೇಶ್ವರಿ ಅವರು 1,085 ಅಂಕಗಳನ್ನು ಪಡೆದು ಗ್ರೇಡ್-2 ತಹಸೀಲ್ದಾರ್ ಆಗಿ ನೇಮಕಗೊಂಡಿದ್ದಾರೆ.
ಚಿಂತಾಮಣಿ ತಾಲೂಕು ಏನಿಗದೆಲೆ ಅಂಚೆ ಗುಂಡ್ಲಹಳ್ಳಿ ಗ್ರಾಮದ ಜಿ.ಕೆ.ನಾಗೇಂದ್ರ (1,103 ಅಂಕ), ಕೋಟಗಲ್ ಅಂಚೆ ಕೆ.ರಾಗುಟ್ಟಹಳ್ಳಿ ಗ್ರಾಮದ ಆರ್.ಜಿ.ಸುಬ್ರಮಣಿ (1,058 ಅಂಕ), ಬಾಗೇಪಲ್ಲಿ ತಾಲೂಕು ಕೊತ್ತಕೋಟೆ ಅಂಚೆ ಮುಮ್ಮಡಿವಾರಿಪಲ್ಲಿಯ ಆರ್.ನಾಗೇಂದ್ರ (1,049 ಅಂಕ), ಗೌರಿಬಿದನೂರು ಪಟ್ಟಣದ ಪುಷ್ಪಾಂಜಲಿ ಚಿತ್ರಮಂದಿರ ಹಿಂಭಾಗದ ಗೌರಿರಾಮನಿಲಯದ ಎಸ್.ರಾಘವೇಂದ್ರ (892 ಅಂಕ) ಅವರು ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ಗಳಾಗಿ ಆಯ್ಕೆಯಾಗಿದ್ದರೆ.
ಉಳಿದಂತೆ ಶಿಡ್ಲಘಟ್ಟ ನಗರದ ಕೋಟೆ ಸರ್ಕಲ್ನ ಟಿ.ಬಿ.ರಸ್ತೆಯಲ್ಲಿರುವ ಸಿ.ಕೆ.ಮಹಾಲಕ್ಷಿ ಕೋಂ ಬಿ.ಆರ್.ಆಂಜನೇಯಲು ಅವರು 1,059 ಅಂಕ ಮತ್ತು ಭಕ್ತರಹಳ್ಳಿಯ ಬಿ.ವಿ.ಗಂಗಾಧರ ಅವರು 1,048 ಅಂಕ ಪಡೆದು ಕೋ ಆಪರೇಟಿವ್ ಸೋಸೈಟಿಯ ಅಸಿಸ್ಟೆಂಟ್ ರಿಜಿಸ್ಟರ್ ಹುದ್ದೆಗಳಿಗೆ ನೇಮಕಗೊಂಡಿದ್ದಾರೆ. ಒಟ್ಟಾರೆ ಜಿಲ್ಲೆಯಿಂದ ಕೆಎಎಸ್ ಅಧಿಕಾರಿಗಳಾಗಿ ಆಯ್ಕೆಯಾದ 12 ಮಂದಿ ನೂತನ ಅಧಿಕಾರಿಗಳಿಗೆ ಜಿಲ್ಲೆಯ ನಾಗರೀಕರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.