(ಸಾಂದರ್ಭಿಕ ಚಿತ್ರ)
ಡೆಹ್ರಾಡೂನ್: ಬಿಸಿಯೂಟದ ಗುಣಮಟ್ಟ ಕಳಪೆಯಾಗಿದೆ ಎಂದು ದೂರಿದ ವಿದ್ಯಾರ್ಥಿಯ ಮೇಲೆ ಪ್ರಾಂಶುಪಾಲೆ ಕಬ್ಬಿಣದ ರಾಡ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಅಮಾನವೀಯ ಘಟನೆ ಉತ್ತರಾಖಂಡ್ ರಾಜ್ಯದಲ್ಲಿ ನಡೆದಿದೆ.
ಡೆಹ್ರಾಡೂನ್ ಜಿಲ್ಲೆಯ ಓಲ್ಡ್ ದಲಾನ್ವಾಲಾ ಪ್ರದೇಶ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ 5ನೇ ತರಗತಿಯ 11 ವರ್ಷದ ರಾಹುಲ್ ಹಲ್ಲೆಗೆ ಒಳಗಾದ ವಿದ್ಯಾರ್ಥಿಯಾಗಿದ್ದಾನೆ.
ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳಿಗೆ ಮಧ್ಯಾಹ್ನ ಊಟ ನೀಡಲಾಗುತ್ತದೆ. ಈ ಊಟದ ಗುಣಮಟ್ಟ ಕಳಪೆಯಾಗಿದೆ ಎಂದು ರಾಹುಲ್ ಪ್ರಾಂಶುಪಾಲೆ ನಸ್ರೀನ್ ಬಾನೋಗೆ ದೂರು ನೀಡಿದ್ದ. ಸಮಸ್ಯೆಯನ್ನು ಅರಿತು ಬಗೆಹರಿಸುವ ಬದಲು ಕೋಪಗೊಂಡ ಆರೋಪಿ ಬಾನೋ ಕಬ್ಬಿಣದ ರಾಡ್ನಿಂದ ವಿದ್ಯಾರ್ಥಿ ರಾಹುಲ್ಗೆ ಮನಬಂದಂತೆ ಥಳಿಸಿದ್ದಾಳೆ
ಮಾರಣಾಂತಿಕ ಹಲ್ಲೆಯಿಂದಾಗಿ ರಕ್ತಸ್ರಾವ ಉಂಟಾಗಿ ರಾಹುಲ್ ಪ್ರಜ್ಞೆತಪ್ಪಿ ಬಿದ್ದಿದ್ದಾನೆ. ತಕ್ಷಣವೇ ಸ್ನೇಹಿತರು ಆತನ ಮನೆಗೆ ಎತ್ತಿಕೊಂಡು ಹೋಗಿದ್ದಾರೆ. ಆಘಾತಕ್ಕೆ ಒಳಗಾದ ಪೋಷಕರು ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಬಾಲಕನ ತಂದೆ ಧರ್ಮೆಂದ್ರ ಅವರು ಆರೋಪಿಯಾಗಿರುವ ನಸ್ರೀನ್ ಬಾನೋ ವಿರುದ್ಧ ಪಾಸ್ವಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.